ಪ್ರಕಾಶಕರು ಹುವಪ್ನೋರ್ ಪ್ರಕಾಶನ ಮಂಠಾಳ-585419, ತಾ: ಬಸವಕಲ್ಯಾಣ, ಜಿಲ್ಲೆ ಬೀದರ ಕರ್ನಾಟಕ(ರಾಜ್ಯ)
Kayuva Devara Vara: A collection of Poems Written by:Veeranna Manthalkar, post: Manthal-585419, Tq: Basavakalyan, Distic:Bidar,mob:No:8105783103/9019991066.Email: veermanthal@gmail.com Published by: Huvpnor Prakashana, Manthal-585419, Tq: Basavakalyan, Distic: Bidar
@ ಹಕ್ಕುಗಳು: ಲೇಖಕರದ್ದು
ಪುಟಗಳು:
ಪ್ರಥಮ ಮುದ್ರಣ: 2014 ನವೆಂಬರ್
ಪ್ರತಿಗಳು: 1000
ಬೆಲೆ: 50/. (ಐವತ್ತು ರುಪಾಯಿಗಳು)
ಅಕ್ಷರ ಜೋಡಣೆ: (ಸುಮೀತ ಕಂಪ್ಯೂಟರ್)
ಮುಖಪುಟ ವಿನ್ಯಾಸ:
ಮುದ್ರಣ:
ಅರ್ಪಣೆ
ಮಲಗಿಕೊಂಡ ವಿಚಾರ ಭಾವನೆಗಳಿಗೆ ಮತ್ತೆ ಮತ್ತೆ ಬಡಿದ್ದೆಬ್ಬಿಸಿ, ಎಚ್ಚರಿಸಿ ಕವಿ ಮನಸ್ಸಿನ ಕಲ್ಪನೆಗಳಿಗೆ ಜಾಗೃತಗೊಳಿಸಿ ಪ್ರೋತ್ಸಾಹಿಸುತ್ತಿರುವ ಒಲವನ್ನು ತುಂಬಿದ ಯುವ ಕನಸುಗಳ ಸ್ನೇಹಿತ/ ಸ್ನೇಹಿತೆಯರನ್ನು ಹೇಗೆ ಮರೆಯಲಿ? ಮರೆಯಲಾಗದಂಥ ನೆನಪಾಗಿ ಉಳಿದಿರಲು ಅವಳು...? ಬತ್ತಿ ಹೋದ ಭಾವನೆಗಳಿಗೆ ಮತ್ತೆ ನೀರೆರೆದು ಮತ್ತೊಂದು ಕಾವ್ಯದ ಕೂಸಿಗೆ ಜನ್ಮ ಕೊಡುವಂತೆ ಉತ್ತೇಜಿಸಿದವಳ ಕಾವ್ಯಧಾರೆ ಚಿಂತನೆಯ ಅಭಿಮಾನಕ್ಕೆ ಈ ಕೃತಿ ಅರ್ಪಣೆ.
ವೀರಣ್ಣ ಮಂಠಾಳಕರ್
ಪರಿವಿಡಿ
ಅರ್ಪಣೆ ಲೇಖಕರ ನುಡಿ ಮುನ್ನುಡಿ ಲೇಖಕರ ಪರಿಚಯ 1. ಪ್ರೀತಿಯೆಂಬ ಗೂಡಿಗೆ ಮರಳಿ ಬಾರದೇ 2. ಹಾಡಿದ್ದೇ ಹಾಡು ಕಿಸ್ಸ್ಬಾಯಿದಾಸ 3. ನಿರೀಕ್ಷೆ 4. ಮಗುವಿನಲ್ಲಿ ನಗುವರಳಲಿ 5. ಕಾಡುವ ನೆನಪು 6. ಮುಖವಾಡಗಳ ಸಂಗದಲ್ಲಿ 7. ವೀರ ಪುರುಷ ಮಲ್ಲಿಕಾರ್ಜುನ 8. ಕನಸಿನರಮನೆಯಲ್ಲಿ... 9. ಕನಕದಾಸ 10. ನೀ ತೊಡುವ ಬಳೆಗಳ ಕೈ 11. ಕಾಯುವ ದೇವರ ವರ 12. ಕಾಣದ ದೇವರ ಪ್ರತಿರೂಪ 13. ಮರಿಯಂದ್ರ ಹ್ಯಾಂಗ್ ಮರೆಯಲಿ 14. ನೀನೆಂದರೆ 15. ಪ್ರೀತಿಯೊಂದೇ ನೆಪ ಮಾಡಿ 16. ಬಾನ ಚೆಂದಿರನ ವೇದನೆ 17. .ಹುಡುಕಾಟ 18. ಭರವಸೆಗಳೆಂಬ ಭಾವನೆ 19. ನಂಬಿಕೆ-ಪ್ರೀತಿ 20. ಸಾರ್ಥಕ ಬದುಕಿನ ಜೀವನ 21. ಕಳೆದು ಹೋಗುವತನಕ 22. ಪ್ರೇರಣೆ 23. ನೀನಿಲ್ಲದೇ ಹೋಗಿದ್ದರೆ 24. ಜಗವೆಲ್ಲ ಮಲಗಿರಲು 25. ಮರುಜನ್ಮ ಪ್ರೀತಿಗೆ 26. ಪ್ರೀತಿಯ ಬೆಲೆ ಗೊತ್ತಿಲ್ಲ 27. ಅವಳು-ಇವಳು 28. ಅಂತರಾಳದ ಗಾಯ! 29. ನೀನಿಲ್ಲದೇ ಹೋಗಿದ್ದರೆ 30. ಜಗವೆಲ್ಲ ಮಲಗಿರಲು
ಇಪ್ಪತ್ತೆರಡು ಹನಿಗವನಗಳು
1. ವಿಪರ್ಯಾಸ 2. ನೆನಪುಗಳು 3. ಹಾಳೆಗಳು 4. ಪ್ರತಿಮೆಗಳು 5. ಮೆರವಣಿಗೆ 6. ಮೌನ ವಿಷಾದ 7. ಕಾವ್ಯ 8. ಗುರಿ 9. ಸ್ಫೂರ್ತಿ 10. ಹೇಗಿರಲಿ 11. ಸ್ವತಾಂತ್ರ್ಯ 12. ಗಾಂಧಿ 13. ಅರೆ ಬೆತ್ತಲೆ 14. ಚಿತ್ತ 15. ಗಾಂಧಿ 16. ಕಾಡತಾನ 17. ಬಿಟ್ಟು ಕೊಡಲಾಗುತ್ತಿಲ್ಲ 18. ಪ್ರೀತಿಯ ಭಾಷೆ 19. ಮನಸ್ಸಿನ ಭಾಷೆ 20. ಕವಿತೆ! 21. ನಾನಿರದಿರುವಾಗ 22. ಅವನಿಗಿಷ್ಟವಿಲ್ಲ
ಪರಿಚಯ
ಸಂಕಲ್ಪ ಸಾಧಕ ಮಂಠಾಳಕರ್
ಬರೆಯುವ ಹುಚ್ಚು, ಓದುವ ಆಸಕ್ತಿ ಇದ್ದರೆ ಸಾಲದು. ಅದಕ್ಕೆ ತಕ್ಕಂತಹ ಕನಸು-ಆಸೆ, ಕಲ್ಪನೆಗಳು ನವಿಲಿನಂತೆ ಗರಿಬಿಚ್ಚಿ ಸದಾ ಪುಟಿದೇಳುವ ಚೆಂಡಿನಂತೆ ಗುರಿ ಮುಟ್ಟಲು ಮತ್ತೆ ಮತ್ತೆ ಪ್ರಯತ್ನಿಸಬೇಕು. ಯಾವಾಗಲೂ ಕ್ರಿಯಾಶೀಲ ವ್ಯಕ್ತಿತ್ವವನ್ನು ಬೆಳೆಸಿಕೊಂಡಿರಬೇಕು. ಒಂದಿಷ್ಟು ತ್ಯಾಗ ಮನೋಭಾವನೆ, ಪರರಿಗಾಗಿ ಸ್ವಲ್ಪ ಸಮಯ ಮೀಸಲಿಟ್ಟು, ಬದುಕಿನ ಜಂಜಾಟವನ್ನು ಬದಿಗೆ ಸರಿಸಿ ಈ ಸಮಾಜಕ್ಕಾಗಿ ನನ್ನಿಂದ ಏನಾದರೂ ಕೊಡಬೇಕು ಎಂಬ ಮನೋಭಾವ ಹೊಂದಿದವನ ದಾರಿಗೆ ಅಡ್ಡವಾಗಿ ಬಡತನ, ಶೋಷಣೆ, ಅಪಮಾನ, ನಿಂದನೆ ಏನೆಲ್ಲಾ ತೊಂದರೆಗಳು ಎದುರಾದಾಗಲೂ ಎಲ್ಲವನ್ನು ಎದುರಿಸಿ ಮುನ್ನುಗ್ಗಬೇಕೋ ಅಥವಾ ಮುಗ್ಗರಿಸಿ ನೆಲಕಚ್ಚಿ ಬೀಳಬೇಕೋ...? ಹೀಗೊಂದು ಪ್ರಶ್ನೆಯನ್ನು ಕೇಳಿದಾಕ್ಷಣ ಬಹುತೇಕರು ಹೇಳುವುದಿಷ್ಟೇ, ಅಂಥವರಿಂದ ಯಾವ ಸಾಧನೆಯನ್ನೂ ಮಾಡಲಾಗುವುದಿಲ್ಲ. ಹಾಗಂತ ಹೇಳುವವರು ಕಾಲು ಹಿಡಿದು ಜಗ್ಗುವವರು ಎಂಬುದು ನನ್ನ ವಾದ ಕೂಡ. ವಿರೋಧಗಳ ಮಧ್ಯೆಯೂ ಸತ್ತೂ ಜೀವಂತವಾಗಿ ಮತ್ತೆ ಮತ್ತೆ "ಫಿನಿಕ್ಸ್" ಹಕ್ಕಿಯಂತೆ ಮೇಲೆದ್ದು ಜೀವನವನ್ನು ಗೆಲ್ಲುತ್ತಾರೆ ಎಂಬುದು ನನ್ನ ಅಭಿಪ್ರಾಯವಾಗಿದೆ. ಈ ಎಲ್ಲಾ ವ್ಯಕ್ತಿತ್ವಕ್ಕೆ ಹೊಂದಿಕೊಳ್ಳುವ ಬದುಕಿನ ಹಲವು ತೊಂದರೆ ತಾಪತ್ರಯ ಎದುರಿಸಿ, ನಮ್ಮ ನಿಮ್ಮ ನಡುವೆ ಹಲವರಿದ್ದಾರೆ ಎಂದರೆ ಆಶ್ಚರ್ಯವಾಗಬಹುದು. ಅವರಲ್ಲಿ ಒಬ್ಬರಾದ ಹೈದ್ರಾಬಾದ ಕರ್ನಾಟಕದ ಪ್ರತಿಭಾವಂತ ಕವಿ, ಲೇಖಕ, ಕತೆಗಾರ, ಸಾಹಿತಿಯಾಗಿ ಅವರು ಗುರುತಿಸಿಕೊಳ್ಳುವ ಬೀದರ್ ಜಿಲ್ಲೆಯ ಯುವ ಬರಹಗಾರರ ಸಾಲಿನಲ್ಲಿ ಪ್ರಮುಖವಾಗಿ ಎದ್ದು ಕಾಣುವ ಹೆಸರು ವೀರಣ್ಣ ಮಂಠಾಳಕರ್ ಅವರು. ಬಸವಕಲ್ಯಾಣ ತಾಲೂಕಿನ ಮಂಠಾಳ ಗ್ರಾಮದ ವೈಜಿನಾಥ ಮತ್ತು ಶರಣಮ್ಮ ಹುವಪ್ನೋರ್ ದಂಪತಿಯ ಮೂರನೇ ಪುತ್ರರಾಗಿ ಜನಿಸಿರುವ ಇವರ ಹುಟ್ಟೂರು ಮಾತ್ರ ಅಜ್ಜಿಯ ಮನೆ ಭಾಲ್ಕಿ ತಾಲೂಕಿನ ಕೇಸರ ಜವಳಗಾ. ತಂದೆ ತಾಯಿಯ ಮುದ್ದಿನ ಮಗನಾಗಿ 01-06-1975 ಜನಿಸಿದರು. ಮಂಠಾಳ ಗ್ರಾಮದಲ್ಲಿಯೇ ಅವರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮುಗಿಸಿ ಮುಂದೆ ಬೀದರದ ಕರ್ನಾಟಕ ಕಾಲೇಜಿನಲ್ಲಿ ಓದಿದರು. ದಶಕದ ಹಿಂದೆ ಅಪ್ಪ ತೀರಿ ಹೋದ ಮೇಲೆ ಬದುಕಿನ ಬೆನ್ನೇರಿ ಹೊಟ್ಟೆ ಬಟ್ಟೆಯ ಚಿಂತೆಗಾಗಿ ಹಲವು ಪಟ್ಟಣಗಳಿಗೆ ವಲಸೆ ಹೋದರು. ವೀರಣ್ಣ ಮಂಠಾಳಕರ್ ಹೋದಲೆಲ್ಲಾ ಸಾಹಿತ್ಯದ ಚಿಂತನೆ ಮಾತ್ರ ಜೊತೆಯಾಗಿಯೇ ಕರೆದೊಯ್ಯುತಿದ್ದರು. ದೂರದ ಎಲ್ಲಿಂದಲೋ ಬರೆದು ಪತ್ರಿಕೆಗಳಿಗೆ ಕತೆ, ಕವನ ಕಳುಹಿಸಿದಾಗ ಅವು ಪ್ರಕಟವಾಗುತ್ತಿದ್ದವು. ವೀರಣ್ಣನವರು ಆದರ್ಶದ ವ್ಯಕ್ತಿಗಳನ್ನು ಮುಂದಿಟ್ಟುಕೊಂಡು ಬರೆಯುವ ಬರಹಗಾರ ಎಂದರೆ ತಪ್ಪಾಗಲಾರದು. ಆ ಕಾರಣಕ್ಕಾಗಿ ಇವರು ಗಾಂಧಿ ಆಗ್ಬೇಕಂದುಕೊಂಡಾಗ ಕವನ ಸಂಕಲನ 2010 ರಲ್ಲಿ ಪ್ರಕಟಿಸಿದಾಗ ನವೆಂಬರ್ 10,2010 ರಲ್ಲಿ ಕನ್ನಡಪ್ರಭ ಪತ್ರಿಕೆಯ ಅಕ್ಷರ ತೋರಣದಲ್ಲಿ ಮತ್ತು ಮಾನಸ ಮತ್ತಿತರೆ ಪತ್ರಿಕೆಗಳಲ್ಲಿ ಕೃತಿ ವಿಮರ್ಶೆಗೊಳಪಟ್ಟಿತ್ತು. ಉತ್ತಮ ಬರಹಗಾರರಾಗಿ ಬೆಳೆಯುತ್ತಿರುವುದಕ್ಕೆ ಎಲ್ಲಾ ಲಕ್ಷಣಗಳು ಇವರಲ್ಲಿವೆ ಎನ್ನಲು ಇವರ ಸ್ವರಚಿತ ಬರಹಗಳೆ ಸಾಕ್ಷಿಯಾಗುತ್ತವೆ. 2002 ರಲ್ಲಿ ಗುಲ್ಬರ್ಗಾದ ಉದಯೋನ್ಮುಖ ಯುವ ಬರಹಗಾರರ ಬಳಗದ ತಾಲೂಕಾ ಸಂಚಾಲಕರಾಗಿ ಸಾಹಿತ್ಯ ಸೇವೆಗೆ ನಿಂತರು. ವೇದಿಕೆಯಡಿ ತಾನು ಬೆಳೆಯುದಕ್ಕಿಂತ ಹೆಚ್ಚು ಅನೇಕ ಯುವ ಸಾಹಿತಿಗಳನ್ನು ಬೆಳೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಅದೇಷ್ಟೋ ಜನ ಇವರಿಂದ ಸಲಹೆ ಪಡೆದು, ಎಂದೂ ಯಾವ ಪತ್ರಿಕೆಯಲ್ಲಿ ಕೂಡ ಗುರುತಿಸಿಕೊಳ್ಳದ ಲೇಖಕರನ್ನು ಮಾರ್ಗದರ್ಶನ ಮಾಡಿದ ಶ್ರೇಯಸ್ಸು ಇವರದ್ದಾಗಿದೆ. ಮಂಠಾಳಕರ್ ಮಾಡಿರುವ ಉಪಕಾರಕ್ಕೆ ಹಲವರು ನೆನೆಯದಿರುವರೇ ಹೆಚ್ಚು. ಕಾರಣ ವೀರಣ್ಣನವರ ಒಡನಾಡಿಗಳೆಲ್ಲ ಆರ್ಥಿಕ ಸ್ಥಿತಿಗತಿಯಿಂದ ಸುಸ್ಥಿತಿಯಲ್ಲಿದ್ದರೆ, ಇವರಿಗೆ ಆರ್ಥಿಕ ಮುಗ್ಗಟ್ಟು, ಬಡತನವೇ ಇವರಲ್ಲಿರುವ ಪ್ರತಿಭೆಗೆ ನುಂಗಿ ಬಿಡುವಂತಿತ್ತು. ಇದರಿಂದ ವೀರಣ್ಣನವರು ಅದೇಷ್ಟೇ ಗಟ್ಟಿ ಬರಹಗಳನ್ನು ಬರೆಯುವ ಸಾಮಥ್ರ್ಯ ಹೊಂದಿದ್ದರೂ ಇವರ ಸಾಹಿತ್ಯಾಸಕ್ತಿಗೆ ಕೊಡಲಿಪೆಟ್ಟು ಬಿದ್ದಂತಾಗಿದೆ. ಯಾರದೇ ಸಹಕಾರ, ಪ್ರೋತ್ಸಾಹವಿಲ್ಲದೇ ಬೆಳೆಯುತ್ತ ಸಾಗುತಿದ್ದಾರೆ. ಹೆದರದೇ ಏಕಾಂಗಿಯಾಗಿ ಕನಸುಗಳನ್ನು ಹೊತ್ತೊಕೊಂಡು 2002ರಲ್ಲಿ ಭಾವಾಂತರಂಗ (ಚುಟುಕು ಸಂಕಲನ), 2003ರಲ್ಲಿ ಹನಿಜೇನು (ಸಂಪಾದನೆ), 2006ರಲ್ಲಿ ಸುಳಿಗಳು (ಕವನ ಸಂಕಲನ) ಮತ್ತು 2010ರಲ್ಲಿ ಗಾಂಧಿ ಆಗ್ಬೇಕಂದುಕೊಂಡಾಗ (ಕವನ ಸಂಕಲನ) ಗಳು ಹೊರತಂದು ಪ್ರಕಟಿಸಿದರು. ಬದುಕಿನ ಬೆನ್ನೇರಿ ಕಥಾ ಸಂಕಲನ ಪ್ರಕಟಣೆಯ ಹಂತದಲ್ಲಿದ್ದು, ಪ್ರತಿಭಾವಂತರ ಪುಟಗಳು (ಲೇಖನಗಳ ಸಂಕಲನ) ಮುತ್ತಿನ ಖಜಾನೆ (ಚುಟುಕು ಸಂಕಲನ) ಜೇನುಗೂಡು (ಅಂಕಣ ಬರಹಗಳು), ಹಸಿವು (ಕಾದಂಬರಿ), ಮಾಧ್ಯಮದೊಳಗಣ (ವಿವಿಧ ಲೇಖನಗಳ ಸಂಕಲನ) ಸೇರಿದಂತೆ ಇನ್ನೂ ಅನೇಕ ಕೃತಿಗಳು ಇವರ ಸಂಗ್ರಹದಲ್ಲಿ ಅಪ್ರಕಟಿತವಾಗುಳಿದಿವೆ. ಪ್ರಸ್ತುತ ‘ಕಾಯುವ ದೇವರ ವರ’ ಕವನ ಸಂಕಲನ ನಾಲ್ಕು ವಷ್ಗಳ ತರುವಾಯ ಪ್ರಕಟಿಸಲು ಮುಂದಾಗಿರುವುದು ಸ್ತುತ್ಯಾರ್ಹವಾಗಿದೆ. ಅದೇ ರೀತಿ ಸಾಹಿತ್ಯದಲ್ಲಿರುವ ಪ್ರೀತಿ, ಆಸಕ್ತಿಯಿಂದ ಇವರದ್ದೇ ಸಂಪಾದನೆಯಲ್ಲಿ 2005 ರಲ್ಲಿ ‘ಸಂಕಲ್ಪ’ ಕನ್ನಡ ಮಾಸ ಪತ್ರಿಕೆ ಪ್ರಾರಂಭಿಸಿದರು. ಪ್ರತಿಕೆ ಎರಡು ವರ್ಷ ನಡೆಸಿ ಅದರಿಂದ ಲಾಭ ಹೊಂದದೆ ಕೈ ಸುಟ್ಟುಕೊಂಡರು. ಮತ್ತೆ ಊರೂರು ಅಲೆದು ಪತ್ರಿಕೆಗಾಗಿ ಮಾಡಿದ ಸಾಲ ತೀರಿಸುವದರಲ್ಲಿ ಜೀವನ ನಡೆಸಿದರು. ಬದುಕಿಗಾಗಿ ನಡೆಸಿದ ಹೋರಾಟದ ಮಧ್ಯೆ ಸಾಹಿತ್ಯದ ಅಭಿರುಚಿ ಮಾತ್ರ ಯಾವತ್ತು ಬತ್ತಿ ಹೋಗಲಿಲ್ಲ. ಎಷ್ಟೇ ಸಮಸ್ಯೆಗಳಿದ್ದರೂ ಕೂಡ ಬರೆಯುವುದು ನಿಲ್ಲಿಸದೆ ಅವರ ಕತೆ, ಕವನ, ಲೇಖನಗಳು ರಾಜ್ಯಮಟ್ಟದ ಪತ್ರಿಕೆಗಳಾದ ಸಂಯುಕ್ತ ಕರ್ನಾಟಕ, ಕರ್ಮವೀರ, ಸುಧಾ, ತರಂಗ, ವಿಜಯ ಕರ್ನಾಟಕ. ಕನ್ನಡಪ್ರಭ, ತುಷಾರ, ಮಯೂರ, ಮಾನಸ, ಪ್ರಿಯಾಂಕ, ಹೊಸತು, ಸಂಜೆವಾಣಿ ಚಂದನ, ಆದರ್ಶ ಗಂಡ ಹೆಂಡತಿ, ಇತ್ತೀಚಿನ ವಿಜಯವಾಣಿ ಹಾಗೂ ಬ್ಲಾಗ್ ಪತ್ರಿಕೆಗಳಾದ ಅವಧಿ ಮತ್ತು ವಿಶ್ವ ಕನ್ನಡಿಗ ನ್ಯೂಜ್ ಪತ್ರಿಕೆಗಳಲ್ಲಿ ಸಹ ವೀರಣ್ಣನವರ ಕಥೆ, ಲೇಖನಗಳು ಪ್ರಕಟಗೊಂಡಿರುವುದಕ್ಕೆ ಇವರಲ್ಲಿರುವ ಅಕ್ಷರ ದಾಹ ತಿಳಿದು ಬರುತ್ತದೆ. ಅಕ್ಷರ ಧ್ಯಾನ ಇವರೊಳಗೆ ಅದೇಷ್ಟರ ಮಟ್ಟಿಗೆ ಕುಳಿತಿದೆ ಎಂಬುದನ್ನು ಅರಿವಾಗುತ್ತದೆ. ಹೀಗೆ ಮೊದಲಾದ ಸ್ಥಳಿಯ ಪತ್ರಿಕೆಗಳಲ್ಲಿ ಮತ್ತು ಗುಲ್ಬರ್ಗಾ ಆಕಾಶವಾಣಿಯಲ್ಲೂ ಇವರ ಬರಹಗಳು ಪ್ರಸಾರವಾಗಿವೆ. ಅನಕೇ ಪ್ರಾತಿನಿಧಿಕ ಸಂಕಲನಗಳಲ್ಲಿ ವೀರಣ್ಣನವರ ಬರಹಗಳು ಕಾಣಸಿಗುತ್ತವೆ. ಹಲವಾರು ಸಂಘ ಸಂಸ್ಥೆಗಳು ಏರ್ಪಡಿಸಿದ ರಾಜ್ಯಮಟ್ಟದ ಕವನ ಸ್ಪರ್ಧೆ, ಕಥಾ ಸ್ಪರ್ಧೆಗಳಲ್ಲಿ ಬಹುಮಾನ ಮತ್ತು ಮೆಚ್ಚುಗೆಯ ಪತ್ರಗಳನ್ನು ಪಡೆದಿರುತ್ತಾರೆ. ಹೇಳಿಕೊಳ್ಳುವಂಥ ಪ್ರಶಸ್ತಿ ಇವರಿಗಿನ್ನು ಸಿಗದಿದ್ದರೂ ಓದುಗರ ಅಪಾರ ಮೆಚ್ಚುಗೆ ಎಲ್ಲಾ ಪ್ರಶಸ್ತಿಗಿಂತ ಮೇಲಾಗಿದೆ ಎಂದು ಭಾವಿಸಿದ್ದಾರೆ. ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಪ್ರಕಟವಾಗುವ ಬರಹದಿಂದ ಸಿಗುವ ಸಂತಸ ಯಾವುದರಲ್ಲೂ ಸಿಗುವುದಿಲ್ಲ ಎಂದು ನಂಬಿದ್ದಾರೆ. ಅದಲ್ಲದೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಏರ್ಪಡಿಸಿದ್ದ 1999ರ ಶಿವಮೊಗ್ಗ ಕಾವ್ಯ ಕಮ್ಮಟ, 2002ರಲಿ ಬದಾಮಿ ಕಥಾಕಮ್ಮಟದಲ್ಲಿ ಪಾಲ್ಗೊಂಡಿದ್ದಾರೆ. 2011 ರಲ್ಲಿ ಬಸವಕಲ್ಯಾಣ ತಾಲೂಕಾಡಳಿತ ವತಿಯಿಂದ ಕನ್ನಡ ರಾಜ್ಯೋತ್ಸವಕ್ಕೆ ಉತ್ತಮ ಸಾಹಿತ್ಯ ಕೃಷಿಗಾಗಿ ತಾಲೂಕಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ. ನೂರಕ್ಕೂ ಹೆಚ್ಚು ಕವಿಗೋಷ್ಠಿ ಹಾಗೂ ಶಿಬಿರಗಳಲ್ಲಿ ಮತ್ತು ರಾಜ್ಯಮಟ್ಟದ ಚುಟುಕು ಕವಿಗೋಷ್ಠಿ ಸಮ್ಮೇಳನಗಳಲ್ಲಿ ಪಾಲ್ಗೊಂಡಿದ್ದಾರೆ. ಕನ್ನಡದ ಹಿರಿಯ ಸಾಹಿತಿಗಳಿಂದ ಯುವ ಸಾಹಿತಿ, ಪ್ರಚಲಿತ ಪ್ರಸಿದ್ಧ ಕವಿಗಳ ಮೊದಲಾದ ಲೇಖಕರ ಬಳಗದವರೊಂದಿಗೆ ಸಂಪರ್ಕ ಹೊಂದಿದ್ದಾರೆ. ಇಷ್ಟಾದರೂ ಇವರಲ್ಲಿ ಯಾವುದೇ ಅಹಂ ಇಲ್ಲ. ಅನ್ಯಾಯ ಇವರು ಸಹಿಸಿಕೊಳ್ಳುವುದಿಲ್ಲ. ಹಾಗಂತ ಇವರ ಬೆಳವಣಿಗೆ ಸಹಿಸದ ಅನೇಕರು ಇವರ ಮೇಲೆ ಇಲ್ಲದ ಅಪವಾದ ಮಾಡುತ್ತಾರೆ ಎಂಬುದು ಇತ್ತೀಚಿನ ಒಂದೆರಡು ವರ್ಷಗಳಲ್ಲಿ ಕೇಳಿ ಬರುತ್ತಿರುವ ಸಂಗತಿಯಾಗಿದೆ. ಕೆಲ ದುಷ್ಟರಿಂದ ಅವಮಾನ, ಅಪಮಾನವನ್ನುಂಡು ತೀರಾ ನೊಂದುಕೊಂಡಂತೆ ಅನ್ಯಾಯಕ್ಕೆ ಸಿಡುದೇಳುತ್ತಾರೆ. ವ್ಯರ್ಥ ಸಮಯಕ್ಕೆ ಕಿವಿಗೊಡದೇ ಅಕ್ಷರವೇ ಉಸಿರೆಂದುಕೊಂಡು ಬದುಕನ್ನು ಸಾಗಿಸುತಿದ್ದಾರೆ. ವೀರಣ್ಣ ಮುಂಗೋಪಿ, ಎಂಬ ಆರೋಪಗಳು ಅವರ ಸುತ್ತಲಿರುವ ಬೊಗಳೆ ಭಟ್ಟರು ಹೇಳುವ ಮಾತಿದು. ಬರೆಯಲು ಬಾರದವನಿಗೆ ಬರವಣಿಗೆ ಬಾರಕೋಲು ಎನ್ನುವ ಹಾಗೆ ಮಂಠಾಳಕರ್ ಬರೆಯುವದನ್ನು ಇಷ್ಟಪಡದವರು ಹೀಗೆನ್ನುತ್ತಾರೆ ಎಂದು ಇವರ ಸಮೀಪವರ್ತಿಗಳು ಉತ್ತರಿಸುತ್ತಾರೆ. ವೀರಣ್ಣನವರು ಅನೇಕ ಬಾರಿ ಆರ್ಥಿಕ ಸಮಸ್ಯೆ ಎದುರಿಸಿದರೂ ಪುಕ್ಕಟೆ ಹಣ ಯಾರಿಗೂ ಕೇಳಲಿಲ್ಲ. ಬದಲಾಗಿ ಸಹಾಯ ಮಾಡಿದವರಿಗೆ ದುಪ್ಪಟ್ಟು ಕೆಲಸ ಮಾಡಿಕೊಟ್ಟಿದ್ದಾರೆ. ಸಾಹಿತ್ಯ ಸೇವೆಗಾಗಿ ಒಂದು ಪ್ರಕಾಶನ ಸಂಸ್ಥೆಯೂ ಹುಟ್ಟು ಹಾಕಿ ಅದರಡಿಯಲ್ಲಿ ಇವರ ಸ್ವಂತ ಕೃತಿಗಳು ಹೊರತಂದಿದ್ದಾರೆ. ನಿರಂತರವಾದ ಇವರ ಸಾಹಿತ್ಯ ಸೇವೆಯಲ್ಲಿ ಅನೇಕ ಅಂಕಣ ಬರಹಗಳು, ಕತೆಗಳು, ಕವನಗಳು ಬರೆದಿದ್ದಾರೆ. ಹಸಿವು ಎಂಬ ಕಾದಂಬರಿ ಸಹ ಬರೆದಿರುವ ವೀರಣ್ಣನವರು ಹತ್ತಾರು ಅಪ್ರಕಟಿತ ಬಿಡಿ ಬರಹಗಳನ್ನು ತಮ್ಮ ಸಂಗ್ರಹದಲ್ಲಿ ಇಟ್ಟುಕೊಂಡಿದ್ದಾರೆ. ಪ್ರಕಟಿಸಲು ಹಣಕಾಸಿನ ತೊಂದರೆಯಿಂದ ಸುಮ್ಮನಿರದೇ ಸಾಹಿತ್ಯ ಕೃಷಿ ಬತ್ತಿ ಹೋಗದ ಜಲದಂತೆ ನಿರಂತರವಾಗಿದೆ. ಇವರಿಂದ ಇನ್ನೂ ಹತ್ತಾರು ಪುಸ್ತಕಗಳು ಹೊರ ಬರುವಷ್ಟಿದ್ದರೂ ಪ್ರಕಟಿಸುವ ಪ್ರಕಾಶಕರು ಮುಂದೆ ಬರದೇ ಇರುವುದು ಕನ್ನಡದ ಯುವ ಬರಹಗಾರರ ಪಾಲಿಗೆ ನೋವಿನ ಸಂಗತಿಯೆನ್ನುತ್ತಾರೆ. ಬೆಂಗಳೂರಿನಿಂದ ಪ್ರಕಟವಾಗುವ ದಿಕ್ಸೂಚಿ ಮಾಸ ಪತ್ರಿಕೆಯಲ್ಲಿ ಪ್ರೋಫ್ ರೀಡರ್ ಆಗಿ ಕೆಲಸ ಮಾಡಿರುವ ವೀರಣ್ಣನವರು ಗುಲ್ಬರ್ಗಾ ಜಿಲ್ಲೆಯ ಸ್ಥಳಿಯ ಪತ್ರಿಕೆಗಳಲ್ಲಿ ಸಹ ವರದಿಗಾರರಾಗಿ, ಉಪ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಇದೀಗ ಬಸವಕಲ್ಯಾಣದಲ್ಲಿಯೇ ನೆಲೆಯೂರಿ 2010ರಿಂದ 2013ರವರೆಗೆ ಕನ್ನಡಪ್ರಭ ಪತ್ರಿಕೆಯಲ್ಲಿ ಮೂರು ವರ್ಷಗಳ ಕಾಲ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ತದನಂತರ ವಿಜಯ ಕರ್ನಾಟಕದ ಗ್ರಾಮೀಣ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಕೆಲವರ ಕುತಂತ್ರಕ್ಕೆ ಬಲಿಯಾಗಿ ವಿಜಯ ಕರ್ನಾಟಕ ಪತ್ರಿಕೆಯ ವರದಿಗಾರನ ಹುದ್ದೆ ಕೂಡ ಇವರು ಬಿಡಬೇಕಾಯಿತು. ಈ ಸಂದರ್ಭದಲ್ಲಿ ವೀರಣ್ಣನವರಿಗೆ ಕಾಡಿದ ಎಂದೂ ಮರೆಯಲಾಗದಂಥ ನೆನಪಾಗಿದೆ ಎಂದು ನೊಂದು ನುಡಿಯುತ್ತಾರೆ. ಕನ್ನಡಪ್ರಭ ಪತ್ರಿಕೆಯ ವರದಿಗಾರಿಕೆ ಬಿಟ್ಟು ವಿಜಯ ಕರ್ನಾಟಕ ಸೇರಿದ್ದಕ್ಕೆ ಸಿಕ್ಕ ಪ್ರತಿಫಲ ಸೊನ್ನೆ. ನಂತರ ಜೀವನ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿತ್ತು. ಸಧ್ಯಕ್ಕೆ ಜೀವನೊಪಯೋಗಕ್ಕಾಗಿ ಕಂಪ್ಯೂಟರ್ ಆಪರೇಟರ್ (ಅಕ್ಷರ ಜೋಡಣೆ) ಕಾರ್ಯ ನಿರ್ವಹಿಸುತ್ತಾ ಜಾಬ್ ವರ್ಕ್ ನಡೆಸುತಿದ್ದಾರೆ. ಕನ್ನಡಪ್ರಭ ಪತ್ರಿಕೆಯಲ್ಲಿ ಬಸವಕಲ್ಯಾಣ ತಾಲೂಕಾ ವರದಿಗಾರರಾಗಿ ಉತ್ತಮ ಕೆಲಸ ಮಾಡುವುದನ್ನು ಸಹಿಸದ ಕೆಲವರು ಇವರ ಮೇಲೆ ಇಲ್ಲದ ದಬ್ಬಾಳಿಕೆ, ಸಂಬಂಧಪಟ್ಟ ಕನ್ನಡಪ್ರಭ ಜಿಲ್ಲಾ ವರದಿಗಾರರಿಗೆ ಇವರ ಮೇಲೆ ಆರೋಪ ಮಾಡಿ ಕೆಲಸದಿಂದ ತೆಗೆಯುವಂತೆ ಶಿಫಾರಸ್ಸು ಮಾಡಿದ್ದರು. ಆಗಲಿಲ್ಲ. ಆಗ ನೇರವಾಗಿ ಬೆಂಗಳೂರು ಪತ್ರಿಕೆ ಕಚೇರಿಯವರೊಂದಿಗೆ ಸಂಪರ್ಕ ಇಟ್ಟುಕೊಂಡು ನಿತ್ಯದ ವರದಿಗಳನ್ನು ಕಳುಹಿಸುತಿದ್ದರು. ಅದು ಅನಿವಾರ್ಯವಾಗಿತ್ತು. ಇವರು ನೇರ, ನಿಷ್ಠೂರವಾಗಿ ವರದಿ ಬರೆಯುವುದನ್ನು ಸಹಿಸದ ಅನೇಕರು ತೊಂದರೆ ನೀಡಿದರು. ಒಬ್ಬ ಬರಹಗಾರನಿಗೆ, ಅವನ ಪ್ರತಿಭೆ ಸಹಿಸಿಕೊಳ್ಳದ ಜನರ ರಾಜಕೀಯ ಇಲ್ಲಿ ನುಸುಳಿರುವುದು ಸ್ಷಷ್ಟವಾಗಿ ಗೋಚರಿಸುತ್ತದೆ. ಹಿಂದುಳಿದ ಕುರುಬ ಸಮುದಾಯದ ವರ್ಗದಿಂದ ಬಂದಿರುವ ವೀರಣ್ಣ ಮಂಠಾಳಕರ್ ಅವರು ಬರವಣಿಗೆಯಲ್ಲಿ ನೇರ, ನಿಷ್ಠೂರವಾಗಿ ಬರೆಯುತ್ತಿರುವುದಕ್ಕೆ ದಗಲಬಾಜಿ ಜನ ಇವರಿಗೆ ಸಹಿಸಿಕೊಳ್ಳಲಿಲ್ಲ. ಹಿಂದುಳಿದ ರಾಜಕೀಯ ಜನಾಂಗದವರಿಗೂ ವೀರಣ್ಣನವರ ಬಗ್ಗೆ ತಪ್ಪು ಸಂದೇಶ, ಮಾಹಿತಿಯನ್ನು ನೀಡಿ, ವಿರಣ್ಣನವರ ಪ್ರತಿಭೆಗೆ ಕೆಸರೆರಚುವ ಕೆಲಸ ಮಾಡಿದರು. ರಾಜಕೀಯ, ಸಾಹಿತ್ಯಿಕ ವಲಯದ ಎಲ್ಲಾ ವಯೋಮಾನದವರು ಇವರನ್ನೇ ಅನುಮಾನದ ದೃಷ್ಠಿಯಿಂದ ನೋಡುವಂಥ ವ್ಯವಸ್ಥೆಯನ್ನು ಹುಟ್ಟು ಹಾಕಿದ್ದರು ಎಂದರೆ ತಪ್ಪಾಗಲಾರದು. ಬಸವಕಲ್ಯಾಣ ತಾಲೂಕಿನ ಕೆಲವರ ಪೂರ್ವಯೋಜಿತ ಸಂಚು ಕೂಡ ವೀರಣ್ಣನವರನ್ನು ಬೀದಿಗೆ ತರುವುದಾಗಿತ್ತು. ಬಸವಕಲ್ಯಾಣ ತಾಲೂಕಿನ ಸ್ಥಳೀಯ ಪತ್ರಿಕೆಯೊಂದರ ಸಂಪಾದಕನೆಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬರ ಪತ್ನಿ 2012 ನೇ ಸಾಲಿನ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗೆ ಸ್ಪರ್ಧಿಸಿದ್ದರು. ಬೀದರ ಜಿಲ್ಲೆಗೆ ಕಸಾಪ ಅಭ್ಯರ್ಥಿಯಾಗಿ ಚುನಾವಣಾ ಕಣದಲ್ಲಿದ್ದರು. ಅವರು ಸರ್ಕಾರಿ ಹಾಗೂ ಅರೆಸರ್ಕಾರಿ ಪ್ರತಿಷ್ಠಿತ ಸಂಘ ಸಂಸ್ಥೆಗಳ ಖಾಯಂ ಪದಾಧಿಕಾರಿ ಹಾಗೂ ಸದಸ್ಯರಾಗಿ ಇರುವುದಾಗಿ ಸುಳ್ಳು ಸುಳ್ಳು ದಾಖಲೆ ಬರೆದುಕೊಂಡಿದ್ದಕ್ಕೆ ವೀರಣ್ಣ ಮಂಠಾಳಕರ್ರವರು ಒಬ್ಬ ಪತ್ರಕರ್ತನಾಗಿ ‘ಸುಳ್ಳಿನ ಸರಮಾಲೆ ಪೋಣಿಸಿದ...’ ಎಂಬ ಶೀರ್ಷಿಕೆಯಡಿಯಲ್ಲಿ ವರದಿಯೊಂದನ್ನು ಬರೆದಿರುವುದನ್ನು ಕನ್ನಡಪ್ರಭದಲ್ಲಿ ಪ್ರಕಟವಾಗಿದ್ದೇ ತಡ ಅದುವೇ ಇವರ ಬದುಕಿಗೆ ಮುಳುವಾಯಿತು. ಇವತ್ತಿಗೂ ಪ್ರತ್ಯಕ್ಷವಾಗಿ ಇಲ್ಲದಿದ್ದರೂ ಪರೋಕ್ಷವಾಗಿ ಕಿರುಕುಳ ನೀಡುತಿದ್ದಾರೆ ಎನ್ನಬಹುದು. ಇದರಿಂದ ಸಾಕಷ್ಟು ಮಾನಸಿಕ ಹಿಂಸೆ ಅನುಭವಿಸಿದ್ದಾರೆ. ಹಲವರ ಕಿರುಕುಳಕ್ಕೆ ಸತ್ತು ಜೀವಂತವಾಗಿರುವ ವೀರಣ್ಣನವರು ಸಾಮಾಜಿಕ ಕೆಟ್ಟ ವ್ಯವಸ್ಥೆಯಿಂದ ತೀರಾ ಬೇಸರಿಸುತ್ತಾರೆ. ಇಡೀ ಸಮಾಜದ ಕಣ್ಣೀರೊರೆಸುವ ಮಾಧ್ಯಮ. ಮಾಧ್ಯಮದೊಳಗಿದ್ದವರ ಕಣ್ಣೀರಿಗೆ ಕರವಸ್ತ್ರ ಆಗದಿರುವುದು ಶೋಚನೀಯ ಸಂಗತಿ ಎನ್ನುತ್ತಾರೆ. ಇವರು ತಮ್ಮದೇ ಜೀವನಗಾಥೆಯನ್ನು ವಿವರಿಸುವ, ಆತ್ಮಕಥೆಯ ರೂಪದ ‘ಸಂಕಲ್ಪ ಸಾಧಕ’ ಎಂಬ ಸಂಕಲನದಲ್ಲಿ ಇವರಿಗಾದ ನೋವು, ಹತಾಷೆ, ಶೋಷಣೆ, ಅನ್ಯಾಯ, ಅಪಮಾನದ ಬಗ್ಗೆ ದಾಖಲಿಸುವುದಾಗಿ ನುಡಿಯುತ್ತಾರೆ. ಬಾಡಿಗೆ ಜನರಿಂದ ಹೆದರಿಸುವುದು, ಹಲವರಿಂದ ಇಲ್ಲದ ಆರೋಪ ಮಾಡಿಸಿ ಸಾರ್ವಜನಿಕ ತಾಣ ಫೇಸ್ಬುಕ್ನಲ್ಲಿ ಮಂಠಾಳಕರ್ ಅವರ ಚರಿತ್ರೆ ಹರಣ ಮಾಡಲು ಯತ್ನಿಸಿರುವುದನ್ನೆಲ್ಲಾ ನೆನಪಿಸಿಕೊಳ್ಳುತ್ತಾರೆ. ಅದನ್ನೆಲ್ಲ ಹೊಸ ಕಾದಂಬರಿಯಲ್ಲಿ ಬೆತ್ತಲಾಗಿಸಿ ಅನಾವರಣ ಮಾಡುವ ಸಂಕಲ್ಪವನ್ನು ತೊಟ್ಟಿದ್ದಾರೆ. ಅನೇಕರು ವೀರಣ್ಣನವರಿಗೆ ಶೋಷಣೆಗೊಳಪಡಿಸಿ ಮಾನಸಿಕ ಹಿಂಸೆ ನೀಡಿದರೂ, ಪತ್ರಿಕೆಯಲ್ಲಿರುವ ಆಸಕ್ತಿ ಮತ್ತು ಸಾಹಿತ್ಯದಲ್ಲಿರುವ ಕರ್ತವ್ಯ ನಿಷ್ಠೆ ಬಿಟ್ಟಿಲ್ಲ. ಆದರೆ ವೀರಣ್ಣನವರು ಕಾರ್ಯ ನಿರ್ವಹಿಸಿದ ಪತ್ರಿಕೆಯ ಜಿಲ್ಲಾ ವರದಿಗಾರರಿಂದ ಸಿಕ್ಕ ಸಹಕಾರ ಅಷ್ಟಕಷ್ಟೆ ಎಂಬುದನ್ನು ಮಾತ್ರ ವಿಷಾದಿಸುತ್ತಾರೆ. ಖೇದದ ಸಂಗತಿಯೆಂದರೆ ರಾಜ್ಯ ಪತ್ರಿಕೆಯ ತಾಲೂಕಾ ವರದಿಗಾರಾಗಿ ದಿನನಿತ್ಯ ನಾಲ್ಕಾರು ಸಾಮಾನ್ಯ ವರದಿ, ವಿಶೇಷ ವರದಿಗಳು ಬರೆದರೂ ಇವರಿಗೆ ತಿಂಗಳಿಗೆ ಸಿಗುವುದು ಕೇವಲ 1 ಸಾವಿರ. ರೂಪಾಯಿ. ಆ ದುಡ್ಡನ್ನು ಕೈಗೆಟುಕಲು ಮೂರ್ನಾಲ್ಕು ತಿಂಗಳವೇ ಬೇಕು. ಅದರಲ್ಲೇ ಇವರು ಜೀವನ ನಡೆಸುವುದಾದರೂ ಹೇಗೆ ಎಂಬುದನ್ನು ಚಿಂತಿಸಬೇಕಾದ್ದು ಅವಶ್ಯವಾಗಿದೆ. ಇಂತಹ ಕಷ್ಟದ ಬದುಕನ್ನು ಸಂಕಷ್ಟದಲ್ಲಿ ಜೀವಿಸುವವನ ಬೆಳವಣಿಗೆ ಸಹಿಸದ ಅನೇಕರು ಪತ್ರಿಕಾ ಮುಖ್ಯಸ್ಥರಿಗೆ ವೀರಣ್ಣ ಮಂಠಾಳಕರ್ ಅವರ ಬಗ್ಗೆ ಇಲ್ಲ-ಸಲ್ಲದ ಆರೋಪಗಳು ಮಾಡಿದ್ದರು. ಹೀಗಾಗಿ ಇವರ ಜೀವನ ಇನ್ನಷ್ಟು ನರಕಕ್ಕೆ ದೂಡಿದವರಿದ್ದಾರೆ. ಬೆಂಗಳೂರಿನಿಂದ ಪ್ರಕಟವಾಗುವ ಪ್ರೇರಣ ಕನ್ನಡ ಮಾಸ ಪತ್ರಿಕೆಯಲ್ಲಿ ಸಹ ವ್ಯವಸ್ಥಾಪಕ ಸಂಪಾದಕರಾಗಿ ಸೇವೆ ಸಲ್ಲಿಸಿದ ಪ್ರತಿಭಾವಂತ ಪತ್ರಕರ್ತ, ಸಾಹಿತಿ, ಕವಿಯಾಗಿ, ಚಿಂತಕರಾಗಿ ವೀರಣ್ಣ ಮಂಠಾಳಕರ್ ಗುರುತಿಸಿಕೊಳ್ಳುತ್ತಾರೆ. ಒಟ್ಟಿನಲ್ಲಿ ಜೀವನವೆಂಬ ಏರುಪೇರಿನ ಹಾದಿಯಲ್ಲಿ ಏನೇ ತೊಂದರೆಗಳಾದರೂ ಛಲವನ್ನು ಬಿಡದೇ ಸಾಹಿತ್ಯ ರಚನೆಯಲ್ಲಿ ಒಂದಿಷ್ಟು ನೆಮ್ಮದಿ ಕಂಡುಕೊಂಡಿದ್ದೇನೆ ಎಂದು ಖುಷಿ ಪಡುತ್ತಾರೆ. ಬರವಣಿಗೆಗೆ ಇವರು ಮೊದಲ ಆಧ್ಯತೆಯನ್ನು ನೀಡಿದ್ದಾರೆ. ಅದುವೇ ಅಧ್ಯ ಕರ್ತವೆಂದು ಭಾವಿಸಿ ಜೀವಿಸುತ್ತಿದ್ದಾರೆ. ಖಾಯಂ ಕೆಲಸವೆಂಬುದು ಇಲ್ಲದೆ ಬದುಕುತ್ತಿರುವ ವೀರಣ್ಣನವರಿಗೆ ಬರವಣಿಗೆಯಲ್ಲಿಯೇ ಏನಾದರೂ ಸಾಧಿಸಬೇಕೆಂಬ ಅಧಮ್ಯ ಆಸಕ್ತಿ, ಛಲವನ್ನು ಕಂಡು ಬರುತ್ತದೆ. ಸಾಹಿತ್ಯ ಆರಾಧಕನಾಗಿ, ಸಂಕಲ್ಪ ಸಾಧಕರಾಗಿ ವೀರಣ್ಣನವರು ಗುರಿತಿಸಿಕೊಳ್ಳುತ್ತಾರೆ. "ತಾನು ಬೆಳೆಯಬೇಕು ತನ್ನವರನ್ನು ಬೆಳೆಸಬೇಕು" ಎನ್ನುವ ಅವರ ಗುಣ ಮೆಚ್ಚುವಂತದ್ದು. ಇವರ ಇನ್ನೊಂದು ವಿಶೇಷ ಗುಣವೆಂದರೆ ಡಂಭಾಚಾರಿ ಸಂಘ, ಸಂಸ್ಥೆಯವರಿಗೆ ಮತ್ತು ಢೋಂಗಿ ಸಾಹಿತಿಗಳಿಗೆ ತಮ್ಮ ಕವನದ ಸಾಲಿನಲ್ಲಿಯೆ ಛೀ ! ಮಾರಿ ಹಾಕುತ್ತಾರೆ. ತೋರಿಕೆಗಾಗಿ ಸಭೆ ಸಮಾರಂಭಗಳಲ್ಲಿ ಭಾಗವಹಹಿಸಿ ಪ್ರಚಾರ ಪಡೆದುಕೊಳ್ಳುವವರ ವಿರುದ್ಧ ಹರಿಹಾಯುವ ಗುಣ ಅವರದು. ಅದೇನೆ ಇದ್ದರು ವೀರಣ್ಣನವರು ತಮ್ಮ ಜೀವನದಲ್ಲಿ ಹೆಚ್ಚು ನೋವನ್ನೆ ಅನುಭವಿಸಿದ್ದವರು. ಬಾಲ್ಯದಲ್ಲಿ ತಂದೆ, ಯೌವ್ವನದಲ್ಲಿ ಸೋದರನ ಸಾವಿನಿಂದ ಸದಾ ದು:ಖವೇ ಉಂಡ ಕವಿ. ವೀರಣ್ಣ ಮಂಠಾಳಕರ್ ಅವರ ಸಾಹಿತ್ಯದ ತುಂಬೆಲ್ಲಾ ನೋವು, ನಿರಾಸೆ, ನಾನಾ ಘಟನೆಗಳಿಂದ ಬದುಕಿನಲ್ಲಿ ಸೋತಿರುವುದನ್ನು ಕಂಡು ಬರುತ್ತದೆ. ಒಬ್ಬ ಮಗ, ಹೆಂಡತಿ, ಪುಟ್ಟ ಮಗಳು, ವಯಸ್ಸಾದ ತಾಯಿಯೊಂದಿಗೆ ವೀರಣ್ಣ ಮಂಠಾಳಕರ್ ಅವರು ಜೀವಿಸುತಿದ್ದಾರೆ. "ಜಗವೆಲ್ಲ ನಗುತಿರಲಿ ಜಗದಳುವು ಎನಗಿರಲಿ" ಎನ್ನುವಂತೆ ವೀರಣ್ಣನವರು ಕೂಡ ತಮ್ಮ ಜೀವನದಲ್ಲಿ ಹತ್ತು ಹಲವು ಮಗ್ಗುಲದಲ್ಲಿ ನೋವಿಟ್ಟುಕೊಂಡು ಇನ್ನೊಬ್ಬರ ಹಿತಕ್ಕಾಗಿ ಸಾಹಿತ್ಯ ರಚಿಸುವಲ್ಲಿ ಸಫಲರಾಗುತ್ತಿದ್ದಾರೆ. ಎನ್ನುವುದಕ್ಕೆ ಅವರ ಇತ್ತೀಚಿನ ಸಮಗ್ರ ಸಾಹಿತ್ಯವೆ ಸಾಕ್ಷಿಯಾಗಿ ನಿಲ್ಲುತ್ತವೆ. ಅವರ ಎಲ್ಲಾ ಸಮಸ್ಯೆಗಳು ದೂರವಾಗಿ ಕನ್ನಡ ಸಾಹಿತ್ಯ ರಂಗದ ಉತ್ತುಂಗಕ್ಕೇರಿ ಉನ್ನತ ಮಟ್ಟಕ್ಕೆ ಬೆಳೆಯಲೆಂದು ಹಾರೈಸೋಣ.
ಮಚ್ಚೇಂದ್ರ ಪಿ.ಅಣಕಲ್, ಯುವ ಕಥೆಗಾರ
1.ಪ್ರೀತಿಯೆಂಬ ಗೂಡಿಗೆ ಮರಳಿ ಬಾರದೇ
ನನ್ನೆದೆಯ ಗೂಡಿನಲ್ಲಿ ಬಚ್ಚಿಟ್ಟುಕೊಂಡ ಪ್ರೀತಿಯೆ ನಿನ್ನೆದೆಯ ಗೂಡಿನಲ್ಲೂ ಜೋಪಾನವಾಗಿತ್ತು ಅಂತರವಾಗಿದ್ದ ನಮ್ಮಿಬ್ಬರ ಪ್ರೀತಿ ಅಂತರ್ಜಾಲ ತಾಣದಿಂದ ಹತ್ತಿರವಾಯಿತಲ್ಲ ಗೆಳೆಯ...!
ಬಿಟ್ಟಿರಲಾಗದಷ್ಟು ಸಂಬಂಧ ಗಟ್ಟಿಯಾಗುತ್ತಲೇ ಸಾಗಿತ್ತು ಒಂದಿನ ಭೇಟಿಯಾಗುವ ನೆಪದಲ್ಲಿ ಬಂದು ಹೋದೆಯಲ್ಲ ನಲ್ಲನ ರೂಪದಲ್ಲಿ, ಆ ದಿನ ನಲ್ಮೆಯಳಾಗಿ ನಿನ್ನ ಬಾಹು ಬಂಧನದಲ್ಲಿ ಲೀನವಾಗಿರಲು ನಾನು
ನಿನ್ನೆಲ್ಲ ಒತ್ತಡದ ಕಾರ್ಯಗಳನ್ನು ಮರೆತು ನನ್ನ ಬಾಹು ಬಂಧನದಲ್ಲಿ ಬೆರೆತು ಹೀರಿಬಿಟ್ಟೆಯಲ್ಲ ರಸದುಂಬಿದ ನನ್ನಿ ಮೈ ಹಣ್ಣಿನಂತೆ, ಮತ್ತೆ ಎಸೆದುಬಿಟ್ಟೆಯಾಕೆ ಸಿಪ್ಪೆಯಂತೆ
ಎರಡು ದೇಹಗಳ ಮೈಮನ ಮುದ್ದಾಡುವಾಗ ಅರಿವಿರಲಿಲ್ಲ ಜಗದ ಆಗು ಹೋಗುಗಳ ಬಗ್ಗೆ ಸಂತೋಷದಿ ಮೈ ಮರೆತು ಮನದ ಭಾವನೆಗಳನ್ನೆಲ್ಲ ಹಂಚಿಕೊಂಡು ನೆಚ್ಚಿಕೊಂಡೆಯಲ್ಲ ಪ್ರಿಯ....
ಪ್ರೀತಿಯೆಂಬ ಊಟದ ಜೊತೆಗೆ ನೂರಾರು ಮುತ್ತುಗಳು ನನ್ನಿಂದ ಎರವಲು ಪಡೆದು ಉಪ್ಪಿನಕಾಯಿಯಂತೆ ಬಳಸಿಕೊಂಡು ಜೊತೆ ಜೊತೆಯಾಗಿಯೇ ಸಾಗುವ ಪಯಣಕ್ಕೆ ಭರವಸೆಯನ್ನಿತ್ತು ಪ್ರೇಮಗೀತೆಯ ನಾದದಲ್ಲಿ ನನ್ನನ್ನು ಮರೆಸಿಬಿಟ್ಟೆಯಲ್ಲ
ಮೊದಲ ದಿನದ ಮೊದಲ ಭೇಟಿಗೆ ನಿನ್ನದೇ ನೆನಪಿನೊಳಗಿದ್ದ ಧ್ಯಾನದಲ್ಲಿ ಸಂಭ್ರಮಿಸಿದ ಕ್ಷಣಗಳು ನೆನಪಿದೆಯಾ ಗೆಳೆಯಾ ಹಾರಿ ಹೋದೆಯಲ್ಲ! ಗಗನವ ಚುಂಬಿಸುತ್ತ ಪೀತಿಯೆಂಬ ಗೂಡಿಗೆ ಮತ್ತೆ ಮರಳಿ ಬಾರದೇ, ನಿನ್ನ ಬರುವಿಕೆಗಾಗಿ ಕಾದು ಕುಳಿತಿದ್ದೆ ಶಬರಿಯಂತೆ, ಆದರೆ ನೀ ಬರಲೇ ಇಲ್ಲ!?
ಅಂದು 26 ನೇ ಜನವರಿ ಗಣರಾಜ್ಯೋತ್ಸವ ನಿಮಿತ್ಯ ನಿನ್ನ ಕರ್ತವ್ಯ ಮರೆತದ್ದನ್ನು ನೆನಪಾಗಿಸುವ ನೆಪದಲ್ಲಿ ಉನ್ನತ ಹುದ್ದೆಯಲ್ಲಿರುವ ಜವಾಬ್ದಾರಿಗೆ; ಹಾಜರಿರಲು ನನ್ನೊಳಗೆ ಹುಟ್ಟಿಸಿದ ಆಸೆ, ಮನದ ತವಕ, ತಲ್ಲಣ ಭಾವನೆಗಳಿಗೆ ತಣ್ಣೀರೆರಚಿ ಹೋದೆಯಾ? ಇಂದಿಗೆ ನಮ್ಮ ನಡುವಿನ ಪ್ರೀತಿಗೆ ಮೂರು ವರ್ಷಗಳು ಕಂಡೆಯಾ!
ವಲ್ಲದ ಮನಸ್ಸಿನಿಂದಲೇ ಪ್ರೀತಿ ಅಮರವಾಗುಳಿಯಲಿ ಎಂಬ ಹಾರೈಕೆಯಲ್ಲಿ ನಿನಗೆ ನಾ ಬೀಳ್ಕೊಟ್ಟಿದ್ದು, ಅಂದಿನಿಂದ ಇಂದಿಗೂ ನಿನ್ನೆಡೆಗೆ ನೆಟ್ಟ ದೃಷ್ಟಿ ಎತ್ತಲೂ ಕದಲದೇ ಹಾಗೇ ಉಳಿಯಿತು
ನನ್ನೊಳಗಿನ ಮುಗ್ಧತೆ; ನಿನ್ನಲಿರುವ ಕಪಟತನ ತಿಳಿಯದೇ ಮೋಸ ಹೋಯಿತು ಈ ಮನವು ಸ್ವಾರ್ಥಕ್ಕಾಗಿ ಬಳಸಿಕೊಂಡು; ಹಣ್ಣಿನ ಸಿಪ್ಪೆಯಂತೆ ನಿರ್ಲಕ್ಷಿಸಿದ ಪರಿ ನ್ಯಾಯ ಸಮ್ಮತವೇ ನಿನಗೆ?
ನನ್ನ ಕಣ್ಣೀರಿನ ಕಥೆ ಕೇಳಿಯಾದರೂ ಒಮ್ಮೆ ತಿರುಗಿ ನೋಡು; ನಿನ್ನದೇ ಕಾರ್ಯ ವರ್ಗದವರು ನನ್ನ ಸಾವಿನ ಕ್ಷಣಗಣನೆ ನಡೆಸುತ್ತಿರುವರು ಬ್ರೆಕಿಂಗ್ ನ್ಯೂಜ್ ಮಾಡಲು ಹೊರಟಿರುವರಲ್ಲ ನನ್ನ ಶವಯಾತ್ರೆಯೊಂದಿಗೆ ನಮ್ಮ ನಡುವೆ ಅಂಕುರಿಸಿದ ಪ್ರೀತಿಯ ಬಾಂಧವ್ಯದ ಕುರಿತ ಚಿತ್ರಣಕ್ಕೆ ನೀನೊಬ್ಬನೇ ಖಳನಾಯಕ!!!
2.ಹಾಡಿದ್ದೇ ಹಾಡು ಕಿಸ್ಸ್ಬಾಯಿದಾಸ
ಸರ್ಕಾರದ ಮೂಲ ಸೌಲಭ್ಯ ಎಲ್ಲೆಡೆ ಸಿಗದೇ ಪರದಾಡುವ ಸ್ಥಿತಿ ಗಂಭೀರ ರಸ್ತೆಗಳಿಲ್ಲ. ಬಡಾವಣೆಗಳಲ್ಲಿ ಸಮರ್ಪಕವಾದ ಚರಂಡಿಗಳಿಲ್ಲದ ತಾತ್ಸಾರ
ಗಬ್ಬು ನಾರುತ್ತಿರುವ ಕಲುಷಿತ ವಾತಾವರಣ ಮಹಿಳೆಯರು, ಮಕ್ಕಳು, ಸಾರ್ವಜನಿಕರು ಅನಾರೋಗ್ಯಕ್ಕೆ ಕಾರಣ ನರಳುವ ರೋಗಿಗಳ ಪಾಲಿಗೆ ಚಿಕಿತ್ಸೆಗೆಂದು ಸರ್ಕಾರಿ ಆಸ್ಪತ್ರೆಗಳು ಇದ್ದರೂ ಸದುಪಯೋಗಕ್ಕಿಲ್ಲ
ಲಕ್ಷ ರೂಪಾಯಿ ಸಂಬಳ ಪಡೆಯುವ ವೈದ್ಯರುಗಳು ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ ನಿತ್ಯ ನೂರಾರು ಬಡವರ ಗೋಳು ಕೇಳುವರಾರು..? ಯಾರಿಗೆ ಯಾರೂ ಇಲ್ಲ
ಕುಡಿಯುವ ನೀರಿಗಾಗಿ ಗ್ರಾಮ ಕುಗ್ರಾಮಗಳಲ್ಲಿ ಎದ್ದಿರುವ ಹಾಹಾಕಾರಕ್ಕೆ ತಿರುಗಿ ನೋಡುವ ಜನಪ್ರತಿನಿಧಿಗಳೆಲ್ಲಿ? ವಿದ್ಯುತ್ದ್ವೀಪ ಕಾಣದೇ ಸೊರಗುತ್ತಿರುವ ಗಾಮಗಳ ಲೆಕ್ಕವೇ ಇಲ್ಲ.
ಇನ್ನೂ ಚುನಾವಣೆ ಮುಗಿದ ಮೇಲೆ ಜನಸಾಮಾನ್ಯರ ಕುಂದು ಕೊರತೆಗಳಿಗೆ ರಾಜಕೀಯ ಜನ ಸ್ಪಂಧಿಸುವರೆಂಬ ಯಾವ ಭರವಸೆಗಳು ಜನರಲ್ಲಿ ಉಳಿದಿಲ್ಲ.
ಬಡವರ ಪ್ರತಿಯೊಂದು ಭಾಗ್ಯಕ್ಕೂ ಕಲ್ಲೇಟು ಬಿದ್ದರೂ, ದೇವರು ವರ ಕೊಟ್ಟರೂ ತಡೆಯುವ ಪೂಜಾರಿಗಳನ್ನ ಕೇಳುವವರೇ ಇಲ್ಲ
ಸೂಕ್ತ ಫಲಾನುಭವಿಗಳಿಗೆ ಸಿಗದೇ ಉಳ್ಳವರ ಪಾಲಾಗುತ್ತಿರುವ ಯೋಜನೆಗಳು. ಇಲ್ಲದವರ ಗೋಳು ಕೇಳುವಿರಾ..? ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳಿರಾ...
ಮುಂದೊಂದು ದಿನ ಜಯಶಾಲಿಯಾಗಿ ಬಂದರೆ ಮತ್ತದೇ ಹಾಡಿದ್ದೇ ಹಾಡು ಕಿಸ್ಸ್ಬಾಯಿದಾಸ ಎನ್ನುವ ಹಾಗೆ ನಿಮಗನಿಸಿದರೆ ಮತದಾರ ಬಂಧುಗಳೇ ಸ್ವಲ್ಪ ಯೋಚಿಸಿ, ಚಿಂತಿಸಿ ಸೂಕ್ತವಾದವರನ್ನೇ ಗೆಲ್ಲಿಸಿ ತರೋಣ ನಾವು ನೀವೆಲ್ಲ ಗಂಭೀರವಾಗಿ ಆಲೋಚಿಸೋಣ!! ನಮ್ಮ ಹಕ್ಕನ್ನು ಪಡೆಯಲು ಹೋರಾಡೋಣ
ನಿರೀಕ್ಷೆ
ಪ್ರಿಯೆ ನಿನ್ನಿ ನೋಟಕ್ಕೆ ಮನಸೋಲದೇ ಹೇಗಿರಲಿ ಮಂದಹಾಸದ ನಗೆಬೀರಿ ಕುಳಿತಿರಲು ನೀನು
ನನ್ನ ಬರುವಿಕೆಗಾಗಿ..! ನೀನಿಟ್ಟಿರುವ ನಿರೀಕ್ಷೆ ಹುಸಿಯಾಗದಿರಲಿ ಎಂದು ಪ್ರಾರ್ಥಿಸುವೆ ನಿನ್ನನ್ನು ಬಿಟ್ಟಿರಲಾಗದ ಚಡಪಡಿಕೆ ನನ್ನೊಳಗೂ ಉಂಟು
ನನ್ನವಳನ್ನಾಗಿ ದಕ್ಕಿಸಿಕೊಳ್ಳಲು ಪರಿಪೂರ್ಣವಾಗಿ ಪ್ರಯತ್ನಿಸುತ್ತಿರುವೆ..... ಆ ವಿಧಿಯಾಟ ನಮಗೆ ಒಂದಾಗಿಸುವುದೋ ಇಲ್ಲ ಎಂಬುದೇನು ಗೊತ್ತಿಲ್ಲ!
ನಿನ್ನೀ ದೃಷ್ಠಿಗೆ ಸೃಷ್ಠಿಯ ಸೌಂದರ್ಯವನ್ನು ಬೆರೆಸಿ ಆ ದೇವರನ್ನು ಪ್ರಶ್ನಿಸಿದೆ ಇವಳಿಗೆ ಇಷ್ಟೊಂದು ಚೆಲುವನ್ನು ಕೊಟ್ಟು ನನಗೆ ಸಾವು ಕೊಟ್ಟೆಯಾ ಎಂದು
ಮಗುವಿನಲ್ಲಿ ನಗುವರಳಲಿ
ಬೆಳಕಿನ ಹುಡುಕಾಟಕ್ಕೆ ಪರದೆ ಸರಿಸುವ ಪರಿ ಕಿಟಕಿಯಾಚೆಯ ಜಗತ್ತು ಹೇಗಿರಬಹುದೆಂಬ ಕುತೂಹಲ ಕಣ್ಮನ ಸೆಳೆಯುವಂಥ ನೋಟ ತನ್ಮಯವಾಗಿ ಕುಳಿತ ಮಗುವೆ ಕತ್ತಲ ಕೋಣೆಯಿಂದ ಆಚೆ ಬರುವ ತವಕದಲ್ಲಿ ಸೂರ್ಯನ ಕಿರಣಗಳೊಂದಿಗೆ ಕಣ್ಣಾ ಮುಚ್ಚಾಲೆಯಾಡುವ ಸಂಭ್ರಮವೆ?
ಹೊರ ಜಗತ್ತಿನ ಹೊಂಬೆಳಕನ್ನು ಕತ್ತಲ ಕೋಣೆಗೆ ನುಸುಳಿ ನಿನ್ನನ್ನು ಕೈ ಬೀಸಿ ಕರೆಯುತ್ತಿಹುದು ಬೆಳಕಿನ ಪ್ರಖರತೆಯಲ್ಲಿ ನಿನ್ನೊಂದಿಗೆ ಆಟವಾಡಲು...
ನಿನ್ನೊಳಗಿರುವ ತವಕ, ತಲ್ಲಣಗಳಿಗೆ ಬೆಳಕು ಸದಾ ಜೊತೆಗಿರಲು ಕನಸುಗಳು ಮತ್ತೆ ಮತ್ತೆ ಅರಳುತ್ತವೆ ನಿನ್ನ ಮುಗ್ಧ ಜೀವದ ಭಾವನೆಗಳು
ಅರ್ಥವಾಗದ ಜಗತ್ತಿಗೆನೊಂದಿಗೆ ದೈತ್ಯ ಪ್ರತಿಭೆಯಾಗಿ ಬೆಳೆಯಬೇಕು ಬದುಕಿನ ವಿಸ್ಮಯಕ್ಕೆ ನಿನ್ನೊಳಗಿನ ನಗು ಹೂವಾಗಿ ಅರಳಿ ಕವಿತೆಯಾಗಿ ಶಾಶ್ವತ ಜನಮನದಲ್ಲಿ ಉಳಿಯಬೇಕು
ಕಾಡುವ ನೆನಪು
ಬಿಡದೇ ಕಾಡುವ ನಿನ್ನ ನೆನಪುಗಳಿಗೆ ಏನೆಂದು ಹೆಸರಿಡಲಿ ಕತ್ತಲು ಸರಿದು ಬೆಳಕು ಹರಿದರೂ ನಿನ್ನದೇ ಧ್ಯಾನ ಕನವರಿಕೆ ಬಿಟ್ಟಿರಲಾಗದ ಚಡಪಡಿಕೆ ನಿನ್ನೊಳು ಮನಸ್ಸು ಲೀನವಾಗಿ ನೆನಪುಗಳಿಂದ ಹೇಗೆ ಬಿಡಿಸಿಕೊಳ್ಳಲೆಂಬ ಚಿಂತೆಯೂ ಹತ್ತಿರ ಸುಳಿಯಲಿಲ್ಲ ಕೊನೆಗೂ ಈ ಮನದ ದುಗುಡಗಳು ಹೇಳಿಕೊಳ್ಳಲು ಆಗಲೇ ಇಲ್ಲ ನನ್ನಲ್ಲಿರುವ ಆ ಪ್ರೀತಿಯ ತಲ್ಲಣಗಳಿಗೆ ಕಾರಣಗಳು ಕೇಳಲೇ ಇಲ್ಲ.
ಮುಖವಾಡಗಳ ಸಂಗದಲ್ಲಿ
ತೋರಿಕೆಗೆ ಮಾತ್ರ ತೋರಣ ಕಟ್ಟುವ ಸಮಾರಂಭಗಳು ಯಾರಿಗೆ ಬೇಕು ಈ ನಿಮ್ಮ ಮೇಜು ಕುರ್ಚಿಗಳು ಹಸಿದವರ ಹೊಟ್ಟೆಗೆ ಅನ್ನ ನೀಡದಿರುವಾಗ ದಣಿದು ಬಂದವರಿಗೆ ದಣಿವಾರಿಸಿಕೊಳ್ಳಲು ಆಗದಿರುವಾಗ
ನೈಜ ಪ್ರತಿಭೆಗಳ ಕೊಲೆಗಳು ನಡೆಯುತ್ತಿವೆ ಆಗಂತುಕರ ಮನಸ್ಸಿನ ಮೇಳಗಳಲ್ಲಿ ಮುಖವಾಡ ತೊಟ್ಟವರ ಮುಖಗಳೇ ಇಲ್ಲಿ ಕಾಣುತಿರುವಾಗ, ಇದಕ್ಕೆ ಕಾರಣಗಳೆಲ್ಲಿ
ನಿತ್ಯವೂ ನಡೆಯುವ ಕೊಲೆಗಳಿಗಂಜದೇ ದುಷ್ಟರ ಸಂಹಾರಕ್ಕೆ ಗಟ್ಟಿ ಮನಸ್ಸಿನ ಸ್ಪಷ್ಟ ಬರಹಗಾರರ ಚಾಟಿಯೇಟು ಬೇಕಿಲ್ಲಿ ಸದೃಢ ಸಮಾಜ ನಿರ್ಮಾಣಕ್ಕಾಗಿ
ಮೂಲ ಪ್ರತಿಭೆಗಳ ನಿಗದಿತ ಕೊಲೆ ಮಾಡಲು ಎಲ್ಲೆಂದರಲ್ಲಿ ಹಾಕುತಿದ್ದಾರೆ ಹೊಂಚು ಕೈ ಚಾಚಿ ಬೇಡುತ್ತಿರುವರು ಕೊಚ್ಚಿ ಹಾಕುವ ಮಚ್ಚು ಅದೇಷ್ಟೇ ಸಲವೂ ಕೊಂದು ಬಿಡಲಿ ಸಾಯುವುದಿಲ್ಲ ನಾವು ಸುಟ್ಟು ಬೂದಿಯಾದರೂ ಮತ್ತೆ ಮತ್ತೆ ಫಿನಿಕ್ಸ್ ಹಕ್ಕಿಯಂತೆ ಜೀವಿಸಬೇಕು ಕೊಚ್ಚಿ ಕೊಲೆಗೈಯುವವರ ಸಂಗದಲ್ಲೇ ಸಾಧನೆಯ ಪಥದಲ್ಲಿ ಸಾಗಬೇಕು
ವೀರ ಪುರುಷ ಮಲ್ಲಿಕಾರ್ಜುನ
ನ್ಯಾಯ ನೀತಿಗೆ ತಲೆಬಾಗಿ ಅನ್ಯಾಯಕ್ಕೆ ಹೋರಾಡಿ ಕಳ್ಳಕಾಕರರಿಗೆ, ದರೋಡೆಕೋರ ರೌಡಿಗಳಿಗೆ ದುಸ್ವಪ್ನವಾಗಿದ್ದ ಪಿಎಸ್ಐ ಬಂಡೆ ಮಲ್ಲಿಕಾರ್ಜುನನ ಅವತಾರವನ್ನೆತ್ತಿ ಬಂಡುಕೋರರಿಗೆ ಸದೆಬಡಿದು ಬಂಡಾಯಕ್ಕೆ ಮೆರುಗು ನೀಡಿದ ಅಧಿಕಾರಿ ವೀರ ಪುರುಷನಾಗಿ ಹೋರಾಡಿದ ಧೀಮಂತ, ದಕ್ಷ ಪೊಲೀಸ್ ಅಧಿಕಾರಿಗಳಿಗೆ ಮಾದರಿಯಾಗಿ ಉಳಿದ ಮಲ್ಲಿಕಾರ್ಜುನನ ಆತ್ಮಕ್ಕೆ ಶಾಂತಿ ಕೋರುವೆ ಅನ್ಯಾಯ, ಅತ್ಯಾಚಾರ, ಭ್ರಷ್ಟಾಚಾರಕ್ಕೆ ಎದೆಸೆಟೆದು ನಿಂತು ದುರುಳನ ದೌರ್ಜನ್ಯವನ್ನು ಹತ್ತಿಕ್ಕಲು ಸಾವಿಗೂ ಹೆದರದೇ ಹೋರಾಡಿದ್ದು ಅವರಲ್ಲಿರುವ ಶೌರ್ಯಕ್ಕೆ ಸರ್ಕಾರ ಕೋಟಿ ಕೊಟ್ಟರೂ ಸಾಲದು ಕೋಟಿ ಕನ್ನಡಿಗರ ಮನದಾಳದಲ್ಲಿ ಅಚ್ಚಳಿಯದೇ ಉಳಿದು ಹುತಾತ್ಮನಾದ ಬಂಡೆಯವರ ಧೈರ್ಯ, ಸ್ಥೈರ್ಯ, ಸಾಹಸಕ್ಕೆ ಹ್ಯಾಟ್ಸ್ಪ್ ಅಭಿಮಾನಿಗಳ ಪಾಲಿಗೆ ಸಿಂಗಂ ಆಗಿ, ನಿಜ ಜೀವನದ ನಾಯಕ ನಟನಾಗಿ ಅಮರವಾಗುಳಿದ ಮಲ್ಲಿಕಾರ್ಜುನ ಇಳಿಸಂಜೆ ಅಸಾಹಯಕತೆಗೆ ಬೆಳಕಾದನು.
ಕನಸಿನರಮನೆಯಲ್ಲಿ...
ಹಳೆಯದನ್ನೆಲ್ಲ ಮರೆಯಲು ಹೊಸ ಕನಸಿನ ಅರಮನೆಯೊಂದು ಕಟ್ಟಿ ಕುಳಿತವನು ನಾನು ಕಣ್ಣಿನ ಬಿಂಬಕ್ಕೆ ದಕ್ಕಿದ ದೃಷ್ಠಿ ಚಿಕ್ಕದಾದರೂ, ಬೆರಗಾದ ನೋಟದಲ್ಲಿ ಜಗತ್ತಿನೆಲ್ಲ ವಿಶಾಲಕ್ಕೆ ಕೈಗನ್ನಡಿಯಾಗುವೆ ದೃಷ್ಠಿಯಿಂದ ಪುಷ್ಠಿ ಕೊಡುವ ವಸ್ತು ಸಿಕ್ಕರೆ ಸಾಕಲ್ಲವೆ?
ಆ ಸೃಷ್ಟಿಕರ್ತನ ಕೈಚಳಕಕ್ಕೂ ಮೀರಿ ಪುಟಿದೇಳುವ ಆಸೆಯೊಳಗೆ ಸಂಭ್ರಮಿಸುವೆ ನಾಳೆಗಳೆಂಬ ಕನಸಿನ ಗರಿಬಿಚ್ಚಿ ಹಾರಾಡುವೆ ರೆಡಿಮೆಡ್ ಯಂತ್ರಕ್ಕೆ ಹ್ಯಾಟ್ಸಫ್ ಹೇಳಿ, ಸಲಾಂ ಇಂಡಿಯಾ ಎನ್ನುವ ದೇಶಿ ಹುಡುಗರ ನೃತ್ಯದಲ್ಲಿ ಕುಣಿದಾಡಲು ಈಗಷ್ಟೇ ಸಜ್ಜಾಗಬೇಕಿದೆ
ಸಿನಿಮಾ ನಟನಾಗುವ ದಿಟ. ಪರಿಪೂರ್ಣ ಕಾಯಿಬಿಡುವ ಹಂತ ಈಗಷ್ಟೇ ಚಿಗುರೊಡೆದು ಸಾಧನೆಯ ಗುರಿ ಮೆಟ್ಟಿ ನಿಂತ ಕದಲದ ನೋಟದಲ್ಲಿ ಕಡಲಾಳದ ಸಂತ ಗೆದ್ದು ಬಂದ ಸಂಭ್ರಮ ಕಣ್ತುಂಬಿಕೊಳ್ಳುತ್ತಿರುವನು ಕನಸಿಗೆ ಜಾರಿಬಿದ್ದ ಮನಸ್ಸನ್ನು ಎಚ್ಚರಾಗಿಸಬೇಡಿ ಪ್ಲೀಜ್.....
ಯಾರೇ ಬಂದು ಕದ ತಟ್ಟಿದರೂ ತನ್ನಷ್ಟಕ್ಕೆ ತಾನು ತೆರದುಕೊಳ್ಳದ ಅದೃಷ್ಟವೆಂಬ ಬಾಗಿಲು ತೆರೆದುಕೊಂಡಿದೆ ಕರೆಯದೇ ಬರುವ ಕನಸುಗಳು ಹೆಬ್ಬಾಗಿಲಲ್ಲಿ ನಿಂತಿವೆ ಕನಸು ಸಾಕಾರಗೊಳ್ಳಲು ಪ್ರಯತ್ನವಂತೂ ಮಾಡಬೇಕು ಮನಸ್ಸಿನ ತರ್ಕಕ್ಕೆ ಆಕರ್ಷಣೆಯಾಗಿ ಸೆಳೆಯುವ ಭಾವಕ್ಕೆ ನಾನಿಲ್ಲಿ ಬಂಧಿಯಾಗಿ ಬಿಡಬೇಕು.
ಕನಕದಾಸ
ತಿಮ್ಮಪ್ಪ ನಿನಗೆ ವಂದನೆ ಭಕ್ತಿಯಿಂದ ನೆನದವರಿಗೆ ಧನ ಕನಕನಾಗಿ ಕಂಡವನೇ ದಾಸ ಪದಗಳನ್ನು ಹಾಡಿ, ಕುಣಿದಾಡಿದ ಕನಕದಾಸ ನಾಮದಿಂದ ಎಲ್ಲೆಡೆ ಹೆಸರಾದ
ನಿನ್ನನ್ನರಿಯಲು ಸಾಲದು ನೂರು ಪದಗಳು ಕಾವ್ಯ ಪರಂಪರೆ ಕೂಟದಲ್ಲಿ ನೀ ಮೆರೆದು ಕಾವ್ಯ ಕುಲುಮೆಯ ಕಂಬಾರಿಕೆ ಬಲ್ಲವರಿಗಷ್ಟೇ ದಕ್ಕುವ ನಿನ್ನ ಬುದ್ಧಿಶಕ್ತಿ ನಿನ್ನಾ ಕಾವ್ಯದ ರಚನಾ ಕ್ರಮ ಮಿಗಿಲಾದದ್ದು
ರಾಜಭೋಗವನ್ನು ಕಿತ್ತುಕೊಂಡ ದುಷ್ಟರಿಂದ ದೂರ ಸರಿದು, ಜಗಜ್ಯೋತಿಯಾಗಿ ಬೆಳಗಲು, ಕಿಂಡಿಯಿಂದ ಶ್ರೀಕೃಷ್ಣನ ದರ್ಶನ ಗೈದೆ ಸಮಾಜೋದ್ಧಾರಕ್ಕಾಗಿ ಕವಿ ಕನಕದಾಸ ನೀನಾದೆ ಮಗ, ಹೆಂಡತಿಯ ಸಾವಿನಿಂದ ಜರ್ಝರಿತಗೊಂಡು ಜಗದ ಜನಕನಾದೆ ಓ ಕನಕ ಕಾವ್ಯ ಪರಂಪರೆಗೆ ನೀನೆ ಅದ್ಭುತ ನಿರ್ದೇಶಕ
ಜಾತಿ ನಿಂದನೆಯಲ್ಲಿ, ಭ್ರಷ್ಟರ ಶೋಷಣೆಯಲ್ಲಿ ಧರ್ಮವನ್ನು ಕಾಪಾಡಿದ ಕನಕ ಗುರವೇ ಜಾತಿ ಜಾತಿಗಳ ನಡುವೆ ಹುಟ್ಟಿಕೊಂಡ ಜ್ವಾಲೆ ನಂದಿಸಲು ಸಮಾನತೆಯ ಸಂದೇಶ ಸಾರಿದ ಭಕ್ತ ಕನಕದಾಸ ಕನಕನೆಂದರೆ ವಜ್ರಕ್ಕಿಂತ ಹೊಳಪುಂಟು
ನೀ ತೊಡುವ ಬಳೆಗಳ ಕೈ
ನೀ ತೊಡುವ ಬಳೆಗಳ ಕೈ ನಾನಾಗಿದ್ದರೆ ಗೆಳತಿ ನಾಜೂಕಾದ ಬಳೆಗಳು ಚೂರಾಗದಂತೆ ಉಡುಗೋರೆಯಾಗಿ ಕೊಟ್ಟು ಸಂಭ್ರಮಿಸುತಿದ್ದೆ ನಯವಾದ ಕೈಗಳಿಗೆ ಶೋಭಿಸುತಿದ್ದೆ ನಿನ್ನ ಮುಖದಲ್ಲಿ ಮಂದಹಾಸ ನಗುವನ್ನು ತರುತಿದ್ದೆ...!
ನುಣುಪಾದ ನಿನ್ನ ಕೆನ್ನೆ ಅದೇ ಕೈಗಳಿಂದ ಸವರುತಿದ್ದೆ ಆ ಬಳೆಗಳ ನಾದದಲ್ಲಿ ನಿನ್ನ ಧ್ಯಾನವನ್ನೆಲ್ಲ ನನ್ನತ್ತ ಸೆಳೆದುಕೊಳುತಿದ್ದೆ...!!
ಕನ್ನಡಿಯೊಳಗಿನ ಪ್ರತಿಬಿಂಬ ನೀನು ಶೃಂಗಾರವನ್ನು ಮಾಡಿಕೊಳ್ಳುವಾಗ ನಿನ್ನ ಕಣ್ಣೊಳಗೆ ಕಣ್ಣಿಟ್ಟು ನೋಡುತಿದ್ದೆ ನಿನ್ನ ಸೌಂದರ್ಯದ ಧ್ಯಾನದಲ್ಲಿ ಲೀನವಾಗಿ ಪ್ರೇಮಗೀತೆಯೊಂದು ಬರೆಯುತಿದ್ದೆ ನಿನ್ನ ಹೆಸರನ್ನೇ ಗುನುಗುನಿಸುತ್ತ ಹಾಡುತಿದ್ದೆ ಗೆಳತಿ ನೀ ಹೋದೆಡೆಯಲೆಲ್ಲ ಇರುತಿದ್ದೆ...!!?
ನಿನ್ನ ಮುಖದ ಕಾಂತಿಯನ್ನು ಕೈ ಬೀಸಿ ಕರೆದು, ಗಾಳಿಯಲ್ಲಿ ತೇಲಾಡುತ್ತ ಸೌಂದರ್ಯವನ್ನು ಸಾರಿ ಹೇಳುವ ಕಿವಿಯೋಲೆಗಳು ಓಲಾಡುವಾಗ, ಅದರ ಕೈ ಹಿಡಿದು ಜೀಕುತಿದ್ದೆ ನಿನ್ನೊಂದಿಗಿಯೇ ಬಿಡದೇ ಜೀವಿಸುತಿದ್ದೆ
ಮಲಗಿದಾಗಲೂ ನೀ.... ನಿನ್ನ ತಲೆಯ ದಿಂಬಾಗಿ ಇರುತಿದ್ದೆ....!! ಹೊಳಪಾದ ನಿನ್ನ ಕಣ್ಣುಗಳಿಂದ ತೊಟ್ಟಿಕ್ಕುವ ಕಣ್ಣೀರು ಒರೆಸುತಿದ್ದೆ ತಡೆಯುತಿದ್ದೆ, ಕೆಂಪಾದ ಕೆನ್ನೆಗುಂಟ ಜಾರುವ ಬಿಸಿಯುಸಿರಿನ ಕಣ್ಣೀರು ನಾನಾಗಿದ್ದರೆ ನೀ ತೊಡುವ ಬಳೆಗಳ ಕೈ
ನಿನ್ನ ದುಖವನ್ನೆಲ್ಲ ನನ್ನದಾಗಿಸಿಕೊಂಡು ಸಾಂತ್ವನಿಸುತಿದ್ದೆ, ಕೈ ಹಿಡಿದು ನಿನ್ನನ್ನು ನನ್ನೆದೆಗಪ್ಪಿಕೊಳ್ಳುತಿದ್ದೆ ಪ್ರಿಯೆ..... ಆರದ, ಮರೆಯದ ಗಾಯ ಹುಣ್ಣಾಗದಂತೆ ಒಲವೆಂಬ ಮುಲಾಮನ್ನು ಹಚ್ಚುತಿದ್ದೆ
ನೀ ನಡೆವ ಹಾದಿಯಲ್ಲಿ..... ಮುಳ್ಳುಗಳೇಷ್ಟೇ ಇದ್ದರೂ ಕಿತ್ತೆಸೆದು ಬಿಡುತಿದ್ದೆ, ನಿನ್ನ ಬಾಳ ಪಯಣದಲ್ಲಿ ಹೂ ಹಾಸಿಗೆ ಚೆಲ್ಲುತಿದ್ದೆ ನಾನಾಗಿದ್ದರೆ ನೀ ತೊಡುವ ಬಳೆಗಳ ಕೈ
ಹೂ ನಗೆಯಾಗುವ ನಿನ್ನ ಮುಖಕ್ಕೆಲ್ಲ ಮುತ್ತಾಗುತಿದ್ದೆ ಹೊಂಗನಸಿನ ರಾತ್ರಿಗೆ ನವಿಲಾಗುತಿದ್ದೆ ಕೋಗಿಲೆಯ ಕಂಠಕ್ಕೆ ಕವಿಯಾಗುತಿದ್ದೆ ಕಲ್ಪನೆಯ ಚೆಲುವಿಗೆ ಚಿತ್ರಕಾರನಾಗುತಿದ್ದೆ ಕೈ ಹಿಡಿವ ಜೊತೆಗಾರನಾಗಿ ಇರುತಿದ್ದೆ ಗೆಳತಿ
ನಿನ್ನ ಮುಗ್ಧ ಮನಸ್ಸಿನ ಸೌಂದರ್ಯದ ಆರಾಧಕನಾಗಿರುತಿದ್ದೆ ಅಭಿಮಾನಿಯಾಗಿರುತಿದ್ದೆ...! ನಾನಾಗಿದ್ದರೆ ನೀ ತೊಡುವ ಬಳೆಗಳ ಕೈ
ಕಾಯುವ ದೇವರ ವರ
ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದೊಡೆ ಎಂಬ ಅಕ್ಕನ ವಚನದಂತೆ ದನದ ಕೊಟ್ಟಿಗೆಯ ಮೇಲೊಂದು ಮನೆಯ ಮಾಡಿ ಹಸುವಿಗೆ ಬೆದರದಿರು ನೀ ಕಂದ
ಅಮ್ಮನ ಮಡಿಲಲ್ಲಿ ಚಳಿಗಾಳಿಗೆ ಬೆಚ್ಚಗಿರದೇ, ಬೆಚ್ಚಿ ಬೆರಗಾಗುವ ನೋಟದಲ್ಲಿ ಕಾತರಿಸುತ್ತಿರುವೆ ಕಾಯುವ ದೇವರ ವರವಾಗಿ ಹುಟ್ಟಿದ ಆಕಳ ಕರು ಎಲ್ಲೆಂದು?
ನಿನ್ನ ಕಾತುರ, ಕುತೂಹಲಕ್ಕೆ ಅಮ್ಮನ ಆಸರೆಯುಂಟು ಮಂಜಿನ ತಂಗಾಳಿಗೆ ಮೈಯೊಡ್ಡಿ ನಿಂತು ಹಿಮಗಿರಿಯ ವಾತಾವರಣ ನಿನ್ನ ಮುಗ್ಧತೆಗೆ ಕರಗುವುದುಂಟು
ಕೊಟ್ಟಿಗೆ ಮೇಲೊಂದು ಮನೆಯ ಮಹಡಿ ಅಮ್ಮನ ತೋಳ ತೆಕ್ಕೆಯಲ್ಲಿ ಮುಗ್ಧತೆಯ ಒಂದು ಕನ್ನಡಿ ನೋಡುತಿರಲು ಜಗವನ್ನು....
ತನ್ನ ಕರುವಿನ ಆಗಮನಕ್ಕೆ ಕಾಯುತ್ತಿದೆ ಹಸು: ತನ್ನ ಕೆಚ್ಚಲೆದೆಯ ಹಾಲುಣಿಸಲು ನೀ ಮೊಲೆಯ ಹಾಲುಂಡು ಮಲಗು ಮಗು ಜೋಗುಳವ ಹಾಡುವಳು ಹೆತ್ತ ಕರುಳು
‘ಮಯೂರ’ ಮಾಸ ಪತ್ರಿಕೆಯ ಏಪ್ರಿಲ್ 2014ರ ಸಂಚಿಕೆಯಲ್ಲಿ ಕಲ್ಪನೆ ಕಾವ್ಯ ವಿಭಾಗದಲ್ಲಿ ಪ್ರಕಟಿತ ಕವಿತೆ.
ಕಾಣದ ದೇವರ ಪ್ರತಿರೂಪ
ಜಗವೇ ಒಂದು ರಂಗಭೂಮಿ ಈ ಜಗದ ಜಾಹಿರಾತಿನ ಪಾತ್ರಧಾರಿಗಳು ನೀವಾಗಿ ಹೊಟ್ಟೆಪಾಡಿಗೆ ತೊಟ್ಟ ವೇಷ ಭೂಷಣವೇ ತಾಯಿ ಬೇರಾಗಿ ಪೋಷಿಸಬೇಕು ಸಾರ್ಥಕ ಜೀವನ ಘೋಷಿಸಬೇಕು ಹೊಟ್ಟೆ ಹಸಿವಿಗೇನಾದರೂ ತಿಂದು
ವೇದಿಕೆಯ ದೃಶ್ಯಕ್ಕಾಗಿ ಮತ್ತೆ ಸಿದ್ಧರಾಗಿ ವಿವಿಧ ಪಾತ್ರ, ಸನ್ನಿವೇಶಕ್ಕೆ ಬದ್ಧರಾಗಿ ಪ್ರೇಕ್ಷಕರ ಕುತೂಹಲ ತಣಿಸಬೇಕು ಮುಂದಿನ ಪೀಳಿಗೆಯ ಸ್ಮøತಿ ಪಟಲಕ್ಕಾಗಿ ಇತಿಹಾಸದ ಪುಟಗಳು ಈ ಮೂಲಕ ತೆರೆದಿಡಬೇಕು
ಕಲಾವಿದರಾಗಿ ಜೀವನಪರ್ಯಂತ ನಟಿಸುತ್ತಲೆ ರಾಮಾಯಣ, ಮಹಾಭಾರತದಂಥ ಕಥೆಗಳಿಗೆ ಮರುಜೀವ ತುಂಬಬೇಕು, ಎಂಬ ನಿಮ್ಮೆಲ್ಲರ ಧ್ಯೇಯ್ಯ ಕರ್ತವ್ಯಕ್ಕೆ ಮೆಚ್ಚಲೇಬೇಕು ನೋಡುಗರ ಕಣ್ಣಿಗೆ ನಿಮ್ಮ ನಟನೆ ಹಬ್ಬವಾಗಬೇಕು
ಇಲ್ಲಿರುವುದು ಬರೀ ನೆಪ ಮಾತ್ರಕ್ಕೆ ಪಾತ್ರಧಾರಿಗಳಾಗಿ ಅವನಾಡಿಸಿದಂತೆ ಆಡಬೇಕು ಎಲ್ಲರ ಬದುಕಿನ ಸೂತ್ರಧಾರನಾಗಿ ಅವನೊಬ್ಬನುಂಟು...!
ಕಾಣದ ದೇವರ ಪ್ರತಿರೂಪವಾಗಿ ನಿಮ್ಮೊಳಗಿನ ಪ್ರತಿಭೆ ಅನಾವರಣಗೊಳಿಸಿದಾಗಲೇ ಹಿಡಿ ತುತ್ತು ಬಾಯೊಳಗೆ... ಸಾಧನೆಯ ಶಿಖರವನ್ನೇರಿದಾಗ ಬಿಚ್ಚಿಡುತ್ತದೆ ಬದುಕಿನ ಕಗ್ಗಂಟು ಜಗದೊಳಗೆ ಆಗ ಖುಷಿ! ಸಂಭ್ರಮ? ಒಳಗೊಳಗೆ ***
ಮರಿಯಂದ್ರ ಹ್ಯಾಂಗ್ ಮರೆಯಲಿ ನನ್ನ ನಿನ್ನ ಭೇಟಿ ಒಂದು ಆಕಸ್ಮಿಕ ಹುಟ್ಟಿರುವ ಪ್ರೀತಿ ಮಾತ್ರ ಆಕಾಶದೆತ್ತರಕ್ಕ ಹೇಗೆ ಮರೆಯಲಿ ನಿನ್ನ ಬಾಳಿಗೆ ಹಚ್ಚಿರುವೆ ನೂರೆಂಟು ಬಣ್ಣ
ಮನಸ್ಸೊಳಗಿಳಿದು ಕನಸುಗಳನ್ನು ಕೊಟ್ಟೆ ಕನವರಿಸುವ ನಿದಿರೆಯೊಳಗೂ ಮುತ್ತನಿಟ್ಟೆ ನಿನಗಾಗಿ ಜೀವ ಕೊಡು ಅಂದ್ರ ಕೊಡ್ತಿನಿ ಚಿನ್ನ ಮರಿಯಂದ್ರ ಹ್ಯಾಂಗ್ ಮರೆಯಲಿ ನಿನ್ನ
ಈ ಜಗವನ್ನೇ ಬಿಟ್ಟು ಹೋಗು ಅಂದ್ರ ಹೋಗ್ತಿನಿ ನಿನ್ನ ಕಣ್ಣೆದುರಿಗಿಂದ ಕಾಣ್ಸದಾಂಗ್ ಇರ್ತಿನಿ ಆದ್ರ ನನ್ನ ಮನಸ್ಸೊಳಗಿಂದ ನೀ ಹಾಗೇ ಇದ್ದಬಿಡ್ತಿಯಲ್ಲ,? ಹೇಳು ಹ್ಯಾಂಗ್ ಮರಿಯಲಿ ನಿನ್ನ
ನನಗಾಗಿ ನೀನು ಕನಸುಗಳು ಕೊಟ್ಟೆ ಬದುಕಿಗೆ ಭರವಸೆಗಳನ್ನಿಟ್ಟೆ ಬಾಯಾರಿಕೆಗೆ ಭಾವನೆಗಳೆಂಬ ಪದಗಳನ್ನು ಕೊಟ್ಟೆ ನನ್ನನ್ನು ಮರೆತು ನೀ ಹಾರಿ ಹೋಗಬೇಡ ಓ ನನ್ನೊಲವಿನ ಚಿಟ್ಟೆ...!!
ನೀನೆಂದರೆ
ನಿನ್ನ ನೆನಪುಗಳೆಂದರೆ ರಸ ಹೀರಿ ಎಸೆಯುವ ಸಿಪ್ಪೆಯಲ್ಲ ಮನದ ಕನವರಿಕೆಯಲ್ಲಿ ಕನಸಾಗಿ ಕಾಡುವಳು ನನಸಾಗಿ ಉಳಿಯದೇ ಗೀಚಿ ಗೀಚಿ ಬರೆಯುವ ಕವಿತೆಗಳಾಗಿ ಉಳಿಯುವಳು
ಬಾಡಿ ಹೋಗದಿರು ಭರವಸೆಗಳೆಂಬ ನೆಲೆಯಲ್ಲಿ ಬೂದಿ ಮುಚ್ಚಿದ ಕೆಂಡದಂಥ ಪ್ರೀತಿ ಧಿಕ್ಕರಿಸದೇ ದೂರ ಸರಿಯದಿರು ಗೆಳತಿ, ನಿನಗಾಗಿ ತಾಜಮಹಲ್ ಕಟ್ಟುವುದಿಲ್ಲ ತಾಜಾ ಮನಸ್ಸಿನ ಬೇಗುದಿಯ ಅಕ್ಷರಗಳಲ್ಲಿ ಬಂಧಿಯಾಗಿಸುವೆ ನಿಷ್ಕಲ್ಮಶ ಪ್ರೀತಿಯಷ್ಟೇ ನನ್ನದು
ನನ್ನ ಮನದ ಕನವರಿಗೆ ಕನಸುಗಳ ಭರವಸೆಗೆ ಭಾವನೆಯಾಗು ನಿನಗಾಗಿ ನಾ ಏನು ಕೊಡಲಿ ತವಕ ತಲ್ಲಣಗಳಿಗೆ ಬೇಗುದಿಯಾಗು
ಪ್ರೀತಿಯೊಂದೇ ನೆಪ ಮಾಡಿ
ಅವಳು ದೂರಾದಳೆಂಬ ಕಾರಣಕ್ಕೆ ನಿತ್ಯ ಕುಡಿಯುತ್ತಿಲ್ಲ ನಾನು ದಿನವೂ ಕಾಡುವ ನೆನಪುಗಳಿಗೆ ಮರೆಯಲಾಗುತ್ತಿಲ್ಲ ಎಂದು
ರಸ್ತೆ ಬದಿ ತೂರಾಡಿಕೊಂಡು ಹೋಗಿ ಬರುವಾಗಲೆಲ್ಲ ನಾನು ಕೇಕೆ ಹಾಕಿ ನಗುತ್ತಿರುವವರ ಒಳ ವೇದನೆ ಕಾಣದಿರಲಿ ಎಂದು
ಜಾಣತನಕ್ಕಿಂತ ಹೆಚ್ಚು ಮನಸ್ಸು ಕೆಟ್ಟಿದೆ ಎನುತ್ತಿರುವೆ ನಾನು ಅರ್ಥಮಾಡಿಕೊಳ್ಳದ ಜನರ ಸಹವಾಸವೇ ಸಾಕಾಗಿದೆ ಎಂದು
ಅವಳು ಮತ್ತೆ ಎದುರಾಗಲಿ ಕುಡಿದ ಅಮಲಿನಲ್ಲಿ ಇರುವಾಗ ನಾನು ಎಲ್ಲಾ ಹೇಳಿ ಬಿಡುವೆ ನಿನ್ನ ನಿಜ ರೂಪ ತಿಳಿಯಿತು ಎಂದು
ಕಾರಣವನ್ನು ಹೇಳದೆ ಮುಖ ತಿರುಗಿಸಿ ಹೋದರೆ ನಾನು ವಿನಂತಿಸುವೆ ಖಾಲಿ ಬಟ್ಟಲಲ್ಲಿ ಮಧು ತುಂಬಿಸಿ ಕೊಡು ಎಂದು
ಜಡಗಟ್ಟಿದ ಸಮಾಜದಿಂದ ದೂರ ಹೋಗುತ್ತಿರುವೆ ನಾನು ಮಡುಗಟ್ಟಿ ನಿಂತ ದು:ಖದ ಕಟ್ಟೆಯನ್ನು ಒಡೆದು ಸಾಂತ್ವನಿಸಿಕೊಳ್ಳಲಿ ಎಂದು
ಮತ್ತದೆ ಅನ್ಯಾಯ ಅತ್ಯಾಚಾರ ಭ್ರಷ್ಟಾಚಾರಕ್ಕೆ ಕುಗ್ಗಿರುವೆ ನಾನು ಪ್ರೀತಿಯೊಂದೇ ನೆಪ ಮಾಡಿ ಆಡಿಕೊಳ್ಳುವ ಜನರಿದ್ದಾರೆ ಎಂದು
ಬಾನಚೆಂದಿರನ ವೇದನೆ
ಕಪ್ಪು ಬಿಳುಪು ಭಾವನೆಗಳಲ್ಲಿ ಬರಿದೆ ನಕ್ಕು ಹರಿದು ಹಾಕಬೇಡ ನನ್ನ ನೆನಪುಗಳು
ರದ್ದಿ ಕಾಗದವಲ್ಲ ಮನಸ್ಸು ನಿನಗಾಗಿ ಕಟ್ಟಿಕೊಂಡಿದ್ದ ಕನಸುಗಳಿಗೆ ಆ ಚಂದ್ರ ಕೂಡ ಬೆರಗಾಗಿದ್ದ ಗೊತ್ತ... ? ನಿನ್ನಾ ಚೆಲುವೆ ಎಷ್ಟು ಚೆಂದ! ನನಗಿಂತ ಎತ್ತರ ನಿನ್ನ ಆಯ್ಕೆ ನಿನ್ನಂಥ ಗೆಳತಿ ನನಗಿಲ್ಲ ಯಾಕೆ ಎಂದು ಕೇಳಿದನು
ಮತ್ತೆ ಬೇಸರದಿ ನುಡಿಯುತ್ತ ಹೇಳಿದನು ನನಗಿರುವ ವೇದನೆ ಕಳೆಯಲೆಂದು ನಿನ್ನಂಥ ಗೆಳತಿ ಸಿಗಲಿಲ್ಲ ಎಂಬ ಕಾರಣಕ್ಕೆ ಕುಳಿತಿರುವೆ ಆಕಾಶದೆತ್ತರಕ್ಕೆ
ಈ ಭೂಮಿ ಮೇಲೆ ಎಲ್ಲಾದರೂ ನನ್ನವಳು ಕೂಡ ಕಾಣ ಸಿಗಬಹುದೆಂದು ಇಣುಕಿ ಇಣುಕಿ ನೋಡುತ್ತಿರುವೆ ಎಂದು ಹೇಳಿದನು ಬಾನ ಚೆಂದಿರನು!
ಹುಡುಕಾಟ ಬೆಳಕಿನ ಹುಡುಕಾಟಕ್ಕೆ ಆ ಚಂದ್ರನನ್ನು ನೋಡಿದೆ ಸೂರ್ಯನನ್ನು ದೃಷ್ಠಿಸಿದೆ ನಿನ್ನಷ್ಟು ಸುಂದರವಾಗಿ ಕಾಣದ ಅವರೆಲ್ಲರೂ ನಿನ್ನೆದುರಿಗೆ ಗೌಣವಾಗಿ ಹೋದರು. ನಾ ನಿನ್ನ ಚೆಲುವಿಗೆ ಮೌನವಾಗಿ ಕವಿತೆಯೊಂದು ಬರೆದು ಕವಿಯಾದೆ ಗೆಳತಿ.
ಭರವಸೆಗಳೆಂಬ ಭಾವನೆ
ಭರವಸೆಯೆಂಬ ಬದುಕಿನ ಭಾಷೆಗೆ ನಿನ್ನ ಹೆಸರನ್ನು ಬರೆದಿರುವೆ ಉಸಿರಾಡುತ್ತಿರುವ ನನಗೆ ನಿನ್ನ ಮರೆಯಲು ಆಗುತ್ತಿಲ್ಲ ಪ್ರಿಯೆ.....
ಮರೆತು ಬಿಡು ಎಂದು ನೀ ನುಡಿದರೆ ಮರೆಯಲಾರೆ ಎಂದು ಹೇಳುವೆನಷ್ಟೇ...
ಆದರೆ ಮನಸ್ಸಿನ ಬೇಗುದಿಯಲ್ಲಿ ಕುಳಿತುಕೊಂಡಿರುವ ನಿನಗೂ ನನ್ನ ಸಾವಿನ ಜೊತೆಗೆ ಸಾಯಿಸಲಾರೆ ಚಿಂತಿಸದಿರು ಸುಖಿಯಾಗಿರು ಎಂದಷ್ಟೇ ಆಶಿಸುವೆ
ಯಾಕೆಂದರೆ ನನಗಿಂತ ಹೆಚ್ಚು ನಿನ್ನನ್ನು ಪ್ರೀತಿಸಿ ಆರಾಧಿಸುವವರು ಸಿಗಬಹುದು!
ನಿನ್ನನ್ನು ಪ್ರೀತಿಸದವರ ಮನಸ್ಸಿನಲ್ಲಿ ನಿನಗೆ ನೀನು ಹುಡುಕಬೇಡ ಸಿಗದಿರುವುದನ್ನು ವ್ಯಥೆಪಟ್ಟು ದುಡುಕಬೇಡ ನಾನೀಗ ಹೋಗುತ್ತಿರುವೆ ಮತ್ತೆ ನನ್ನನ್ನು ಕರೆಯುವ ಪ್ರಯತ್ನವನ್ನು ಮಾಡಬೇಡ
ನನ್ನ ಆತ್ಮಕ್ಕೆ ಶಾಂತಿ ಸಿಗಲಿ ಎಂದಷ್ಟೇ ಹಾರೈಸು ನೀ ನನ್ನ ಪ್ರೀತಿಸದಿದ್ದರೂ ಸಂಪೂರ್ಣವಾಗಿ ದ್ವೇಷಿಸು! ನನ್ನ ಗೋರಿಯ ಮೇಲೆ ಮುಖವಿಟ್ಟು ಅತ್ತು ಕರೆಯಬೇಡ ಪ್ರೀತಿಸಿರುವುದಕ್ಕೆ ಮನ್ನಿಸು!! ನಂಬಿಕೆ-ಪ್ರೀತಿ
ಈ ನಿನ್ನ ಪ್ರೇರಣೆ ಪ್ರೋತ್ಸಾಹಕ್ಕೆ ನನ್ನ ಬಳಿ ಕೊಡಲೇನಿದೆ ವಿಶ್ವಾಸ-ಭರವಸೆಗಳನ್ನು ಬಿಟ್ಟರೆ?
ಹೂವಿನಂಥ ಒಂದು ಮನಸ್ಸಿದೆ ನಿನ್ನ ತುಟಿಗೆ ಸವರುವ ಸ್ನೇಹವೆಂಬ ಸಿಹಿ ಜೇನಿದೆ!
ಅದರಲ್ಲೇ ನಮ್ಮಿಬ್ಬರ ನಂಬಿಕೆ ಉಳಿದಿದೆ.
ಸಾರ್ಥಕ ಬದುಕಿನ ಜೀವನ
ಮನಸ್ಸು ಕನಸು ಕಲ್ಪನೆ ವಾಸ್ತವಕ್ಕೆ ಬರೀ ಸೊಗಸು!
ಈ ಮೂರು ಮೆಟ್ಟಿಲುಗಳನ್ನು ದಾಟಿ ಹೊರಗೆ ಬಂದಾಗ ಒಂದು ಸುಂದರ ಜೀವನ
ಇಲ್ಲವಾದರೆ ಏರು ಪೇರಿನ ವಿರಹದ ಗಾಯನ ದುಡುಕಿದರೆ ದು:ಖ ದುಮ್ಮಾನ
ಪ್ರೀತಿಯಲ್ಲಿ ಎಡವಿದರೆ ಮರೆಯಲಾಗದ ನೋವೆಂಬ ಬಹುಮಾನಕ್ಕೆ ಜೀವನವೆಂಬ ಕಾಣಿಕೆ ನೀಡಬೇಕು.... ಸಾರ್ಥಕ ಬದುಕಿನ ಸಾಧನೆಗೆ ಕೈ ಜೋಡಿಸಬೇಕು...!!
ಕಳೆದು ಹೋಗುವತನಕ
ಕವಿತೆಗೆ ಮರು ಜೀವ ತುಂಬಿದ ನಿನಗೆ ಹೇಗೆ ಮರೆಯಲಿ ಮರೆತೇನೆಂದರೂ ಮರೆಯಲಾಗದ ನಿನ್ನಾ ನೆನಪುಗಳೆಂಬ ಸೌಂದರ್ಯಕ್ಕೆ ಹಚ್ಚಲಾಗುತ್ತಿಲ್ಲ ಕಿಚ್ಚು
ನಿನ್ನ ಪ್ರೀತಿಯೆಂಬ ಮಾಯೆ ಹುಚ್ಚು ಹಿಡಿಸಿ ಬಿಟ್ಟಿದೆಯೇ ಎಂಬ ಅನುಮಾನ.! ನಿನ್ನಾ ಕಿರುನಗು...ವಿಗೂ ನನ್ನ ಕಂಡರೆ ಅದೇನೋ ಬಿಗುಮಾನ
ಆದರೆ ನಿನಗೆ ನಾ ಪ್ರೀತಿಸಲು ಆ ದೇವರ ಕರುಣೆ ಇರಲಿಲ್ಲ ಬಂಧನಗಳೆಂಬ ಸಂಬಂಧಗಳಲ್ಲಿ ಸಿಲುಕಿರುವ ಜೀವದ ಭಾವನೆಗಳಿಗೆ ನೀರೆರೆಯಲು ನೀ ಬಿಟ್ಟರೆ ನನಗೆ ಬೇರಾರು ಬೇಕಿರಲಿಲ್ಲ ನೀ ಬೇಕು ಎಂಬ ಹಕ್ಕುಗಳಿಗೆ ಬಿಕ್ಕಳಿಗೆ ಹತ್ತಿರುವುದು ನಿಂತಿಲ್ಲ
ಒಂದು ಮಾತ್ರ ನಿಜ.? ನೀನೊಂದು ಚೆಲುವಿನ ಖನಿಜ ತಪ್ಪಿಸಿಕೊಳ್ಳದೇ ನಿನ್ನನ್ನು ದಕ್ಕಿಸಿಕೊಳ್ಳುವ ಅವಕಾಶವಾದಿಯಾಗಿ ನಿನಗಾಗಿ ನನ್ನುಸಿರನ್ನು ಹಾಗೇ ಹಿಡಿದಿಟ್ಟುಕೊಳ್ಳುವೆ
ನೀ ಬರುವತನಕ ಈ ಕವಿತೆ ಕಳೆದು ಹೋಗುವತನಕ ನಿನ್ನ ಧ್ಯಾನದಲ್ಲಿ ಲೀನವಾಗುವೆ!
ಪ್ರೇರಣೆ
ಬದುಕಿನ ಭರವಸೆಗಳೆಲ್ಲ ನೆಲಕಚ್ಚಿದಾಗ ನೀ ಬಂದೆ ಗೆಳತಿ ಎನ್ನ ಬಾಳಿನಲ್ಲಿ ಗೋಳಿನ ಕಂತೆಯೇ ಹಾಸಿಗೆಯಾಗಿ ಹೊದ್ದು ಮಲಗಿರಲು ನೆಮ್ಮದಿಯಿಲ್ಲದ ಜೀವನ ಮುದುರಿ ಮೂಲೆ ಸೇರಿದಾಗ ನಿನ್ನ ಸಾಂತ್ವನದ ನುಡಿಗಳು ಬಡಿದೆಬ್ಬಿಸದವು ಎಚ್ಚರಿಸಿದವು ಎಚ್ಚರಾಗುತಿದ್ದೇನೆ ಮತ್ತೆ ಮತ್ತೆ ನಿನ್ನ ಪ್ರೇರಣೆ, ಪ್ರೋತ್ಸಾಹಕ್ಕೆ...
ನೀನಿಲ್ಲದೇ ಹೋಗಿದ್ದರೆ
ನನಗಾಗಿ ನೀ ಕಾಯದೇ ಇದ್ದಿದ್ದರೆ ಏನಾಗುತಿತ್ತು ಗೊತ್ತಿರಲಿಲ್ಲ ಪ್ರಿಯೆ ಈ ಜಗತ್ತು ಶಪತ್ತ್ ತೊಟ್ಟಿತ್ತು ಮಾರಕಾಸ್ತ್ರಗಳನ್ನು ಹೊತ್ತು ನನ್ನನ್ನು ಮುಗಿಸಲೆಂಬ ಗತ್ತಿನಿಂದ ನಿನ್ನದೊಂದು ಕರೆಗೆ; ಧ್ವನಿ ಕೇಳಿ ಕಾಲ್ಕಿತ್ತು ಓಡಿತ್ತು ಈಗ ನಾನು ನಿನ್ನ ಭರವಸೆಗಳೆಂಬ ನೆರಳಿನಲ್ಲಿ ಉಸಿರಾಡುತಿದ್ದೇನೆ
ಜಗವೆಲ್ಲ ಮಲಗಿರಲು
ನಾನು ಎಚ್ಚರಗೊಂಡು ತಾರೆಗಳನ್ನು ಏಣಿಸುತಿರಲಿಲ್ಲ ಚಂದ್ರನನ್ನು ನೋಡಿ ಬೆರಗಾಗಲಿಲ್ಲ ಗೆಳತಿಯ ಮುಖದಲ್ಲಿ ಕಂಡ ಮಂದಹಾಸದ ನಗೆಯಿಂದ ದೀಪದ ಬೆಳಕಲ್ಲಿ ಪ್ರಜ್ವಲಿಸುತಿತ್ತು ಓಡಿ ಹೋದ ಕತ್ತಲನ್ನು ಅವಳು ಮತ್ತೆ ಹಿಂಬಾಲಿಸಿ ಹೋದಳು ಅವಳ್ಯಾರೆಂದು ತವಕಿಸಿದ ಮನಸ್ಸಿಗೆ ಮನದನ್ನೆಯ ಪ್ರೇಯಸಿ ಕಂಡಳು!?
ಮರುಜನ್ಮ ಪ್ರೀತಿಗೆ
ಈ ಬಾನು ಭೂಮಿ ಒಂದಾಗಿ ಮಳೆ, ಗಾಳಿ, ನೀರು ಕೊಡುವತನಕ ನಾವು ಬದುಕಿರಲಾರೆವು ಎಂದು ಚಿಂತಿಸಬೇಡ ಆ ಗುಡುಗು, ಸಿಡಿಲಿನ ಅರ್ಭಟದಲ್ಲಿ ನಮ್ಮಿಬ್ಬರ ಪ್ರೇಮ ನಿವೇದನೆ ದೇವರಿಗೆ ಸಲ್ಲಿಸೋಣ ಮರು ಜನ್ಮ ಕೊಡು ಪ್ರೇಮಿಗಳಾಗಿ ಬದುಕಲು ಮಗದೊಮ್ಮೆ ಎಂದು
ಪ್ರೀತಿಯ ಬೆಲೆ ಗೊತ್ತಿಲ್ಲ
ಈ ಪ್ರೀತಿ ಪ್ರೇಮ ಬರೀ ಹುಡುಗಿಯರಿಗೆ ಸಂಬಂಧಿಸಿದ್ದಲ್ಲ ಹುಚ್ಚು ಮನಸ್ಸಿನ ಹುಡುಗರಿಗೆ ಅದರ ಬೆಲೆ ಗೊತ್ತಿಲ್ಲ ತನಗಿಷ್ಟವಾದವಳು ಸಿಗಲಿಲ್ಲಂತ ಕುಡಿಯುತ್ತಾರೆ ಅಪ್ಪ ಅಮ್ಮ ನೋಡಿದ ವರನ ಜೊತೆಗೆ ಮದುವೆಯಾಗಿ ಜೀವಿಸುತ್ತಾರೆ.!!
ಅವಳು-ಇವಳು
ಕನಸಲೂ ನೀನೆ ಮನಸ್ಸಲೂ ನೀನೆ ನನ್ನ ಕಣ್ಣೊಳಗೂ ನೀನೆ ಎಂದು ಹಗಲಿರುಳು ಕನವರಿಸುವ ಪ್ರೇಮಿಗೆ ಕಣ್ಣಿಲ್ಲದ ತಾಯಿಯೊಬ್ಬಳು ಇದ್ದಳು ಅವನ ಪಾಲಿಗೆ ಗೆದ್ದಲ ಹುಳುವಾಗಿದ್ದÀಳು.!
ಅಂತರಾಳದ ಗಾಯ!
ಮತ್ತೆ ಮತ್ತೆ ನೆನಪಾಗಬೇಡ ನೆಪ ಮಾತ್ರಕ್ಕೆ ಮನಸ್ಸು ಕೊರೆದು ಮನೆ ಮಾಡಿ ವಾಸಿಸಬೇಡ ವಾಸಿಯಾಗಲಿಲ್ಲ ಯಾವುದೇ ಮುಲಾಮನ್ನು ಹಚ್ಚಿದರೂ ನೀ ಮಾಡಿರುವ ಗಾಯಕ್ಕೆ ಕೆರೆಯಲೂ ಆಗುವುದಿಲ್ಲ ಕಾರಣ ಅಂತರಾಳದಲ್ಲಿ ಆದ ಗಾಯ ನಿನಗೂ ಕಾಣದೇ ಉಳಿಯಿತಲ್ಲ ಎಂಬ ವಿಪರ್ಯಾಸ ಕಾಡುತ್ತಿದೆ.....
ನೀನಿಲ್ಲದೇ ಹೋಗಿದ್ದರೆ
ಕಾಯದೇ ಇದ್ದಿದ್ದರೆ ನಿನಗಾಗಿ ಏನಾಗುತಿತ್ತು ಗೊತ್ತಿರಲಿಲ್ಲ ಪ್ರಿಯೆ ಈ ಜಗತ್ತು ಶಪತ್ತ್ ತೊಟ್ಟಿತ್ತು ಮಾರಕಾಸ್ತ್ರಗಳನ್ನು ಹೊತ್ತು ನನ್ನನ್ನು ಮುಗಿಸಲೆಂಬ ಗತ್ತಿನಿಂದ ನಿನ್ನದೊಂದು ಕರೆಗೆ; ಧ್ವನಿ ಕೇಳಿ ಕಾಲ್ಕಿತ್ತು ಓಡಿತ್ತು ಈಗ ನಾನು ನಿನ್ನ ಭರವಸೆಗಳೆಂಬ ನೆರಳಿನಲ್ಲಿ ಉಸಿರಾಡುತಿದ್ದೇನೆ
ಜಗವೆಲ್ಲ ಮಲಗಿರಲು
ನಾನು ಎಚ್ಚರಗೊಂಡು ತಾರೆಗಳನ್ನು ಏಣಿಸುತಿರಲಿಲ್ಲ ಚಂದ್ರನನ್ನು ನೋಡಿ ಬೆರಗಾಗಲಿಲ್ಲ ಗೆಳತಿಯ ಮುಖದಲ್ಲಿ ಕಂಡ ಮಂದಹಾಸದ ನಗೆಯಿಂದ ದೀಪದ ಬೆಳಕೊಂದು ಪ್ರಜ್ವಲಿಸುತಿತ್ತು ಓಡಿ ಹೋದ ಕತ್ತಲನ್ನು ಅವಳು ಮತ್ತೆ ಹಿಂಬಾಲಿಸಿ ಹೋದಳು ಅವಳ್ಯಾರೆಂದು ತವಕಿಸಿದೆ ಮನದನ್ನೆಯ ಪ್ರೇಯಸಿ ಕಂಡಳು!?
ಇಪ್ಪತ್ತೆರಡು ಹನಿಗವನಗಳು
23. ವಿಪರ್ಯಾಸ ಯಾರನ್ನೂ ಕೂಡ ಮೆಚ್ಚಿಸಲಿಕ್ಕಾಗಿ ನಾನು ಬರೆಯುವುದಿಲ್ಲ ಕಾರಣ ಮೆಚ್ಚಿ ಬಂದವಳೇ ನಾ ಬರೆಯುವದನ್ನು ಮೆಚ್ಚಲಿಲ್ಲ
24. ನೆನಪುಗಳು ನಿನ್ನ ನೆನಪುಗಳೇ ಹಾಗೆ ಎಲ್ಲಿಂದಲೋ ಬಂದು ಮೌನವಾಗಿ ತಬ್ಬಿಕೊಳ್ಳುವ ತಂಗಾಳಿಯಂತೆ
25. ಹಾಳೆಗಳು ಖಾಲಿ ಹಾಳೆಯಂತಲ್ಲ ಈ ಬದುಕು ಬರೆದಂತೆಲ್ಲ ಹಾಳೆಗಳು ತುಂಬು ಬಸುರಿ ತನ್ನ ಪ್ರಸವ ಕಾಲದ ನಿರೀಕ್ಷೆ ಓದುಗನ ಮುಂದಿಡುತ್ತವೆ
26. ಪ್ರತಿಮೆಗಳು ಗಾಂಧಿ ತತ್ವ-ಆದರ್ಶಗಳು ಯಾರಿಗೆ ಬೇಕು..? ಹೋರಾಟ ಪ್ರತಿಭಟನೆಗೆ ಮಹಾತ್ಮರ ಪ್ರತಿಮೆಗಳು ಸಾಕು.....
27. ಮೆರವಣಿಗೆ ಬುದ್ಧ, ಬಸವ, ಅಂಬೇಡ್ಕರ್- ಗಾಂಧಿ ವೃತ್ತಗಳಲ್ಲಿ ಸಾಗುತ್ತಿವೆ ಪ್ರತಿಭಟನೆ, ಕೂಗು ಮೌನ ಮೆರವಣಿಗೆ ಅಲ್ಲಲ್ಲೇ ಸಿಡಿದೇಳುತ್ತಿವೆ ದ್ವೇಷ, ಅಸೂಯೆ ಹೊಟ್ಟೆ ಕಿಚ್ಚಿನ ಹೊಗೆ
28. ಮೌನ ವಿಷಾದ ಮನದಲ್ಲೇ ನೆನದು ಕೊಂದು ಬಿಡುವ ಭಾವನೆಗಳು ನಿಗೂಢ ಪ್ರೇಮ! ತುಟಿ ಸೋಕಿ ಮೈ ಮುಟ್ಟುವ ಮನಸ್ಸಾದರೆ ಅದು ಕಾಮ?!
29. ಕಾವ್ಯ ನೀನಿಲ್ಲದ ಕಾವ್ಯ ಅಪೂರ್ಣ ನೀನಿರುವಾಗ ಗೆಳತಿ ಪರಿಪೂರ್ಣ ಕವಿತೆ
30. ಗುರಿ ಸಾವಿಗೆ ಒಂದೇ ಗುರಿ ಸ್ಮಶಾನ! ಸಾಧನೆಗೆ ನೂರೆಂಟು ಗುರಿ ಜೀವನ!!
31. ಸ್ಫೂರ್ತಿ ಬದುಕುವ ಆಸೆ ನನಗೆ ನಿನ್ನಿಂದ ಇದ್ದರೆ ಮಾತ್ರ ಸ್ಫೂತಿ!
32. ಹೇಗಿರಲಿ ನಶೆ ತುಂಬಿದ ನಿನ್ನ ನೆನಪುಗಳಿಗೆ ಮುತ್ತುಗಳ ಆಸರೆಯಿಲ್ಲದೆ ಹೇಗಿರಲಿ ಗೆಳತಿ
33. ಸ್ವತಾಂತ್ರ್ಯ ಅರೆ ಬೆತ್ತಲೆಯಾಗಿ ಓಡಾಡಿದ ಗಾಂಧಿ ದೇಶದ ಸ್ವಾತಂತ್ರ್ಯಕ್ಕಾಗಿ ಬೆತ್ತಲಾಗುತ್ತಿದ್ದಾಳೆ ನಾರಿ ಸ್ವತಂತ್ರ ಜೀವನಕ್ಕಾಗಿ
34. ಗಾಂಧಿ ನೀ ಹುಟ್ಟಿದಿದ್ರ ಈ ಕಾಲಕ್ಕ ಬೆತ್ತಲಾದವರ ಸಂಘ ಕಟ್ಟಿಕೊಳ್ಳಬಹುದಿತ್ತು
35. ಅರೆ ಬೆತ್ತಲೆ ಬರುವಾಗ ಬೆತ್ತಲೆ ಹೋಗುವಾಗ ಬೆತ್ತಲೆ ಬಂದು ಹೋದ ನಡುವೆಯು ಗಾಂಧಿ ಒಬ್ಬನೇ ಅರೆ ಬೆತ್ತಲೆ!
36. ಚಿತ್ತ ಬೆತ್ತಲಾಗಿ ಎಲ್ಲರ ಚಿತ್ತ ತನ್ನತ್ತ ಹರಿಸಿದಾತ ಗಾಂಧಿ ಅವನ ತತ್ವಕ್ಕೆ ಎರಚಿದ್ದೇವೆ ಬೂದಿ!!
37. ಗಾಂಧಿ ನೀನೆ ಬೆತ್ತಲಾದ ಮೇಲೆ ನಮ್ಮದ್ಯಾವ ಲೆಖ್ಖ! ಅದಕ್ಕಾಗಿ ನಿನ್ನ ತತ್ವ ಒಂದಿಷ್ಟು ಭಿನ್ನವಾಗಿಸಿಕೊಂಡು ಗಳಿಸುತಿದ್ದೇವೆ ರೊಕ್ಕ!!